ನವದೆಹಲಿ: ಉನ್ನತ ಶಿಕ್ಷಣ ಸಂಸ್ಥೆಗಳ ಜಾತಿ ಆಧಾರಿತ ತಾರತಮ್ಯ ತಡೆಯುವ ಉದ್ದೇಶದಿಂದ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಆದರೆ ಇದರ ವಿರುದ್ಧ ಜನರಲ್ ಕೆಟಗರಿಯ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ಕಾರಣವೇನು ಇಲ್ಲಿದೆ ಸಂಪೂರ್ಣ ವಿವರ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ ನಿಯಮಗಳು, 2026 ಎಂಬ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಈ ನಿಯಮದ ಪ್ರಕಾರ ದೇಶದ ಪ್ರತಿಯೊಂದು ವಿಶ್ವವಿದ್ಯಾಲಯಗಳಲ್ಲಿ ಕಡ್ಡಾಯವಾಗಿ ಸಮಾನತಾ ಸಮಿತಿಯೊಂದನ್ನು ರಚಿಸಬೇಕು.
ಈ ಸಮಿತಿಯು ಎಸ್ ಸಿ, ಎಸ್ ಟಿ, ಒಬಿಸಿ ವಿದ್ಯಾರ್ಥಿಗಳ ಜಾತಿ ಆಧಾರಿತ ದೂರುಗಳನ್ನು ಆಲಿಸಿ ಸಮಸ್ಯೆ ಬಗೆಹರಿಸಬೇಕಿದೆ. ಸಮಿತಿಯಲ್ಲಿ ಎಸ್ ಸಿ, ಎಸ್ ಟಿ, ಒಬಿಸಿ, ಅಂಗವಿಕಲರು ಮತ್ತು ಮಹಿಳಾ ಪ್ರತಿನಿಧಿಗಳಿರಬೇಕು. ಕ್ಯಾಂಪಸ್ ಗಳಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಮೇಲೆ ಜಾತಿ ಆಧಾರಿತ ದೌರ್ಜನ್ಯವನ್ನು ತಡೆಯುವುದು ಇದರ ಉದ್ದೇಶವಾಗಿದೆ.
ಈ ಹಿಂದೆ ನಡೆದಿದ್ದ ರೋಹಿತ್ ವೇಮುಲಾ, ಪಾಯಲ್ ರೆಡ್ಡಿ ಪ್ರಕರಣಗಳ ತನಿಖೆ ವೇಳೆ ಜಾತಿ ಆಧಾರಿತ ಕಿರುಕುಳ ವಿದ್ಯಾರ್ಥಿಗಳ ಜೀವಕ್ಕೆ ಅಪಾಯವುಂಟು ಮಾಡುತ್ತದೆ ಎಂದು ಗಂಭೀರವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್ ಯುಜಿಸಿಗೆ ಇದನ್ನು ತಡೆಯುವ ನಿಟ್ಟಿನಲ್ಲಿ ಪರಿಣಾಮಕಾರೀ ಯೋಜನೆಗೆ ಜಾರಿಗೆ ತರುವಂತೆ ನಿರ್ದೇಶಿಸಿತ್ತು. ಅದರಂತೆ ಯುಜಿಸಿ ಈಗ ಹೊಸ ನಿಯಮ ಜಾರಿಗೆ ತಂದಿದೆ.
ವಿರೋಧ ಏಕೆ?
ಆದರೆ ಈ ಹೊಸ ನಿಯಮವನ್ನು ವಿರೋಧಿಸಿ ಮೇಲ್ವರ್ಗದ ಮತ್ತು ಜನರಲ್ ಕೆಟಗರಿ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಇದು ಏಕಪಕ್ಷೀಯ ನಿಯಮವಾಗಿದೆ. ಇದರಿಂದ ಜನರಲ್ ಕೆಟಗರಿಯವರಿಗೆ ಯಾವುದೇ ರಕ್ಷಣೆಯೂ ಇಲ್ಲ. ಹಿಂದುಳಿದ ವರ್ಗದವರಿಗೆ ಮಾತ್ರ ರಕ್ಷಣೆ ನೀಡುತ್ತದೆ. ಒಂದು ವೇಳೆ ಮೇಲ್ವರ್ಗದ ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಯಾರಿಗೆ ದೂರು ನೀಡಬೇಕು? ಒಂದು ವೇಳೆ ಹಿಂದುಳಿದ ವಿದ್ಯಾರ್ಥಿಯೇ ಮೇಲ್ವರ್ಗದ ವಿದ್ಯಾರ್ಥಿಗಳ ಮೇಲೆ ನಿಯಮದ ಲಾಭ ಪಡೆದು ಸುಳ್ಳು ದೂರು ನೀಡಿದರೆ ಏನು ಮಾಡಲಾಗುತ್ತದೆ ಎಂಬುದಕ್ಕೆ ಸ್ಪಷ್ಟತೆಯಿಲ್ಲ. ಹೀಗಾಗಿ ಇದು ಮುಂದಿನ ದಿನಗಳಲ್ಲಿ ಮೇಲ್ವರ್ಗದ ಅಥವಾ ಜನರಲ್ ಕೆಟಗರಿ ವಿದ್ಯಾರ್ಥಿಗಳಿಗೆ ರಕ್ಷಣೆಯೇ ಇಲ್ಲದಂತೆ ಮಾಡಲಿದೆ. ಈ ನಿಯಮ ಜಾತಿ ತಾರತಮ್ಯವನ್ನು ಕಡಿಮೆ ಮಾಡುವುದಿಲ್ಲ. ಬದಲಾಗಿ ವಿಭಜನೆಗೆ ದಾರಿ ಮಾಡಿಕೊಡುತ್ತಿದೆ ಎಂದು ಆರೋಪಿಸಿ ಬೀದಿಗಳಿದು ಹೋರಾಟ ನಡೆಸುತ್ತಿದ್ದಾರೆ.