ವಯನಾಡ್ (ಕೇರಳ): ಕಾಂಗ್ರೆಸ್ ನಾಯಕಿ ಮತ್ತು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಕೇರಳದ ವಯನಾಡ್ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಅನಾವರಣಗೊಳಿಸಬೇಕಿದ್ದ ನಾಮಫಲಕವೊಂದು ವೇದಿಕೆಯ ಮೇಲೆ ಮುರಿದು ಬೀಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಅಪಘಾತದ ಬಗ್ಗೆ ಪ್ರಿಯಾಂಕಾ ಗಾಂಧಿ ಆಘಾತ ವ್ಯಕ್ತಪಡಿಸಿದ್ದಾರೆ, ಅದಲ್ಲದೆ ನಾಮಫಲಕ ಬೀಳುತ್ತಿರುವುದನ್ನು ನೋಡಿ ಅವರು ಶಾಕ್ ಆಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಪಯ್ಯಂಪಳ್ಳಿಯ ಮಾನಂತವಾಡಿಯಲ್ಲಿ ಹೊಸ ಪುರಸಭೆಯ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲು ಪ್ರಿಯಾಂಕಾ ಗಾಂಧಿ ವಯನಾಡ್ನಲ್ಲಿದ್ದರು. ತಮ್ಮ ಭೇಟಿಯ ಸಮಯದಲ್ಲಿ, ಗಾಜಾದ ಪರಿಸ್ಥಿತಿಯ ಬಗ್ಗೆ ಪ್ರಿಯಾಂಕಾ ಕೂಡ ಬಲವಾದ ಹೇಳಿಕೆ ನೀಡಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷದಿಂದಾಗಿ ನಾಗರಿಕರು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಹತ್ಯೆಯ ಬಗ್ಗೆ ಅವರು ದುಃಖ ಮತ್ತು ಕಳವಳವನ್ನು ವ್ಯಕ್ತಪಡಿಸಿದರು.
"ಇದು ಮಾನವೀಯ ಮಟ್ಟದಲ್ಲಿ ತುಂಬಾ ತಪ್ಪು. ನಾನು ಇದನ್ನು ಮೊದಲೇ ಹೇಳಿದ್ದೇನೆ ಮತ್ತು ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ, ಗಾಜಾದಲ್ಲಿ ಏನು ನಡೆಯುತ್ತಿದೆ ಎಂಬುದು ಸ್ವೀಕಾರಾರ್ಹವಲ್ಲ" ಎಂದು ಪ್ರಿಯಾಂಕಾ ಹೇಳಿದರು.
ಗಾಜಾದಲ್ಲಿ ಕದನ ವಿರಾಮಕ್ಕೆ ಕರೆ ನೀಡುವ ವಿಶ್ವಸಂಸ್ಥೆಯ ಇತ್ತೀಚಿನ ಮತದಾನದಿಂದ ದೂರವಿದ್ದಕ್ಕಾಗಿ ಅವರು ಭಾರತ ಸರ್ಕಾರವನ್ನು ಟೀಕಿಸಿದರು. "ನಮ್ಮ ಸರ್ಕಾರ ಶಾಂತಿ ಮತ್ತು ನಾಗರಿಕ ರಕ್ಷಣೆಗೆ ಮತ ಚಲಾಯಿಸದಿರಲು ಆಯ್ಕೆ ಮಾಡಿಕೊಂಡಿರುವುದು ನಾಚಿಕೆಗೇಡಿನ ಮತ್ತು ನಿರಾಶಾದಾಯಕವಾಗಿದೆ" ಎಂದು ಅವರು ಹೇಳಿದರು. "ನಿಜವಾದ ನಾಯಕತ್ವ ಎಂದರೆ ಸತ್ಯ, ನ್ಯಾಯ ಮತ್ತು ಅಹಿಂಸೆಗಾಗಿ ನಿಲ್ಲುವುದು."