Publish Date: Sat, 08 Aug 2026 (14:56 IST)
Updated Date: Sat, 08 Aug 2026 (14:59 IST)
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ವಿಶಿಷ್ಟ ಹಾಸ್ಯಪ್ರಜ್ಞೆ ಹಾಗೂ ವಾಗ್ದಾಟಿಯಿಂದ ಐಐಟಿ ದೆಹಲಿಯ 57ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ರಂಜಿಸಿದ್ದಾರೆ.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ, "ನಾನೇನು ಬಾಗೇಶ್ವರ್ ಬಾಬಾ ಅಲ್ಲ, ಆದರೂ ನಿಮ್ಮ ಮನಸ್ಸಿನಲ್ಲಿ ಏನು ಓಡುತ್ತಿದೆ ಎಂದು ನಾನು ಊಹಿಸಬಲ್ಲೆ" ಎಂದು ಪ್ರಧಾನಿ ಹೇಳುತ್ತಿದ್ದಂತೆಯೇ ಇಡೀ ಸಭಾಂಗಣದಲ್ಲಿ ನಗುವಿನ ಅಲೆ ಎದ್ದಿತು.
ವಿದ್ಯಾರ್ಥಿಗಳ ಮನದಾಳ ಅರಿತ ಪ್ರಧಾನಿ
"ನೀವೆಲ್ಲರೂ ಇಂದು ಈ ಸಭಾಂಗಣದಲ್ಲಿ ಹಾಜರಿದ್ದೀರಿ. ಆದರೆ ನಿಮ್ಮ ಮನಸ್ಸಿನ ಯಾವುದೋ ಮೂಲೆಯಲ್ಲಿ ಬೇರೆಯದ್ದೇ ಯೋಚನೆಗಳು ಓಡುತ್ತಿರುತ್ತವೆ. ನಾನೇನು 'ಬಾಗೇಶ್ವರ್ ಬಾಬಾ' ಅಲ್ಲ, ಆದರೆ ಪ್ರತಿಯೊಬ್ಬ ವಿದ್ಯಾರ್ಥಿಯ ಮನಸ್ಸಿನಲ್ಲೂ ಏನೇನೋ ಆಲೋಚನೆಗಳು ಓಡುತ್ತಿವೆ ಎಂದು ನನಗೂ ಅನಿಸುತ್ತಿದೆ" ಎಂದು ತಮಾಷೆಯಾಗಿ ಹೇಳಿದರು.
ಮುಂದುವರಿದು ಮಾತನಾಡಿದ ಅವರು, "ಪ್ರತಿಯೊಬ್ಬ ವಿದ್ಯಾರ್ಥಿಯೂ ಭವಿಷ್ಯದ ಬಗ್ಗೆ ತಮ್ಮದೇ ಆದ ಕನಸು ಮತ್ತು ದೂರದೃಷ್ಟಿಯನ್ನು ಹೊಂದಿರುತ್ತಾರೆ. ಕೆಲವರು ತಮ್ಮ ಮೊದಲ ಸಂಬಳಕ್ಕಾಗಿ ಕಾಯುತ್ತಿರಬಹುದು, ಇನ್ನು ಕೆಲವರು ಹೊಸ ನಗರದಲ್ಲಿ ಹೊಸ ಪಯಣಕ್ಕೆ ಸಿದ್ಧರಾಗುತ್ತಿರಬಹುದು. ಕೆಲವರು ಸ್ವಂತ ಸ್ಟಾರ್ಟ್ಅಪ್ ಕನಸು ಕಾಣುತ್ತಿದ್ದರೆ, ಇನ್ನು ಕೆಲವರು ಸ್ಪರ್ಧಾತ್ಮಕ ಪರೀಕ್ಷೆಗಳ ಮೇಲೆ ಕಣ್ಣಿಟ್ಟಿರಬಹುದು" ಎಂದು ವಿದ್ಯಾರ್ಥಿಗಳ ಭಾವನೆಗಳಿಗೆ ಧ್ವನಿಯಾದರು.
ವಿದ್ಯಾರ್ಥಿಗಳಿಗೆ ಭವಿಷ್ಯದ ದಾರಿ ತೋರಿಸಿದ ಪ್ರಧಾನಿ ಮೋದಿ, "ಇಂದಿನ ಬದಲಾಗುತ್ತಿರುವ ಜಗತ್ತಿನಲ್ಲಿ ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿದೆ. ಸದಾ ಕಲಿಯುವ ಆಸಕ್ತಿಯನ್ನು ಜೀವಂತವಾಗಿಟ್ಟುಕೊಳ್ಳುವವರಷ್ಟೇ ಯಶಸ್ವಿಯಾಗುತ್ತಾರೆ. ಮುಂದಿನ 30 ರಿಂದ 35 ವರ್ಷಗಳಲ್ಲಿ ನೀವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ 'ವಿಕಸಿತ ಭಾರತ' ನಿರ್ಮಾಣದ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಪ್ರತಿಯೊಂದು ಹೆಜ್ಜೆಯೂ ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಇರಲಿ" ಎಂದು ಕರೆ ನೀಡಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ