Publish Date: Fri, 06 Dec 2019 (10:16 IST)
Updated Date: Fri, 06 Dec 2019 (10:19 IST)
ಲಕ್ನೋ: ಒಂದೆಡೆ ಹೈದರಾಬಾದ್ ನಲ್ಲಿ ಪಶುವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಪೈಶಾಚಿಕವಾಗಿ ಕೊಲೆಗೈದ ಆರೋಪಿಗಳನ್ನು ಪೊಲೀಸರು ಎನ್ ಕೌಂಟರ್ ಮಾಡಿ ಮುಗಿಸಿದ್ದರೆ, ಇನ್ನೊಂದೆಡೆ ಉನ್ನಾವೋದಲ್ಲಿ ನಡೆದಿದ್ದ ಅಮಾನುಷ ಅತ್ಯಾಚಾರ ಸಂತ್ರಸ್ತೆಯ ಕತೆ ಇದಕ್ಕೆ ತದ್ವಿರುದ್ಧವಾಗಿದೆ.
ದೇಶವನ್ನೇ ತಲ್ಲಣಗೊಳಸಿದ್ದ ಮತ್ತೊಂದು ಅತ್ಯಾಚಾರ ಪ್ರಕರಣ ಉನ್ನಾವೋ ಅತ್ಯಾಚಾರ ಪ್ರಕರಣ. ಕಳೆದ ವರ್ಷ ಡಿಸೆಂಬರ್ ನಲ್ಲಿ ಶಿವಮ್ ಮತ್ತು ಶುಭಂ ತ್ರಿವೇದಿ ಎಂಬಿಬ್ಬರು ಅಪರಹರಿಸಿ ಅತ್ಯಾಚಾರವೆಸಗಿದ್ದರು ಎಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಳು. ಈ ಬಗ್ಗೆ ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಈ ನಡುವೆ ಆರೋಪಿಗಳು ಕೆಲವು ಕಾಲ ಬಂಧನಲ್ಲಿದ್ದು, ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು.
ಈ ಸಂದರ್ಭದಲ್ಲಿ ಸಂತ್ರಸ್ತೆ ಮತ್ತು ಕುಟುಂಬದವರಿಗೆ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಸಂತ್ರಸ್ತೆ ಬಿಹಾರ ಪೊಲೀಸರಿಗೆ ದೂರು ನೀಡಿದ್ದರೂ ಅವರು ಕ್ರಮ ಕೈಗೊಂಡಿರಲಿಲ್ಲ. ಇದೀಗ ಪ್ರಕರಣದ ವಿಚಾರಣೆಗಾಗಿ ರಾಯ್ ಬರೇಲಿಯ ಕೋರ್ಟ್ ಗೆ ಹಾಜರಾಗಲು ತೆರಳುವಾಗ ಐವರು ಆರೋಪಿಗಳು ಸಂತ್ರಸ್ತೆಯನ್ನು ತಡೆದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದಾರೆ.
ಇದರ ನಡುವೆಯೇ ಆಕೆ ಸುಮಾರು 1 ಕಿ.ಮೀ. ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಗ್ರಾಮಸ್ಥರು ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಇದೀಗ ಆಕೆಯ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಹಾಗಿದ್ದರೂ ತನ್ನ ಮೇಲೆ ಐವರು ದಾಳಿ ಮಾಡಿರುವ ಬಗ್ಗೆ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದಾಳೆ.