ಮೂರು ಬಾರಿ ತಲಾಕ್ ಎಂದು ಹೇಳುವ ಮೂಲಕ ಪತ್ನಿಗೆ ವಿಚ್ಛೇದನ ನೀಡುವ ಹಕ್ಕು ಮುಸ್ಲಿಂ ಧರ್ಮಾನುಯಾಯಿಗಳಿಗಿದೆ. ಇದರ ದುರುಪಯೋಗ ಪಡಿಸಿಕೊಂಡು ಕ್ಷುಲ್ಲಕ ಕಾರಣಕ್ಕೆ ಪತ್ನಿಗೆ ವಿಚ್ಛೇದನ ನೀಡಿದ ಸಾಕಷ್ಟು ನಿದರ್ಶನಗಳನ್ನು ಕಂಡಿರುತ್ತೇವೆ. ಫೋನ್ ಸಂದೇಶದ ಮೂಲಕ ತಲಾಕ್ ಕಳುಹಿಸಿದ ಉದಾಹರಣೆಗಳು ಇವೆ. ಇದೆಲ್ಲ ಪುರುಷರದಾಯಿತು. ಇಲ್ಲೊಂದು ವಿಭಿನ್ನ ನಿದರ್ಶನವಿದೆ. ಇಲ್ಲೊಂದು ಯುವತಿ ವರದಕ್ಷಿಣೆ ವಿರುದ್ಧ ಸಿಡಿದೆದ್ದಿದ್ದು ಮದುವೆಯಾದ ಮಾರನೇ ದಿನವೇ ಫೋನ್ ಮೂಲಕ ಪತಿಗೆ ತಲಾಕ್ ನೀಡಿ ದಿಟ್ಟತನ ತೋರಿಸಿದ್ದಾಳೆ.
ಉತ್ತರಪ್ರದೇಶದ ಭಗವಾನ್ ಪುರ್ ಮೂಲದ ಮೊಹಸೀನಾ ಎಂಬ 19 ವರ್ಷದ ಯುವತಿ ಮೊಹಮ್ಮದ್ ಆರೀಫ್ ಎಂಬಾತನನ್ನು ವಿವಾಹವಾಗಿದ್ದಳು. ಮಧುರಮಯವಾಗಬೇಕಿದ್ದ ಮೊದಲ ರಾತ್ರಿ ಆಕೆಯ ಪಾಲಿಗೆ ಕರಾಳವಾಗಿತ್ತು. ಅಂದೇ ಪತಿ ಆಕೆಗೆ ವರದಕ್ಷಿಣೆ ತರುವಂತೆ ಪೀಡಿಸಿದ್ದಾನೆ. ತಕ್ಷಣ ತಾಯಿ ಅನ್ವಾರಿ ಬೇಗಂಗೆ ಕರೆ ಮಾಡಿದ ಮೊಹಸೀನಾ ನಡೆದ ವಿಷಯವನ್ನು ತಿಳಿಸಿದ್ದಾಳೆ. ಆಕೆಗೆ ಧೈರ್ಯ ಹೇಳಿದ ತಾಯಿ ತಕ್ಷಣ ಮನೆಗೆ ಹಿಂತಿರುಗುವಂತೆ ಹೇಳಿದ್ದಾಳೆ. ಅಂತೆಯೇ ಮೊಹಸೀನಾ ತನ್ನ ಪತಿಯ ಗ್ರಾಮದ ಕೆಲವು ಜನರ ಜೊತೆಗೂಡಿ 10 ಕೀಲೋಮೀಟರ್ ದೂರದ ತನ್ನ ತವರಿಗೆ ಹಿಂತಿರುಗಿದ್ದಾಳೆ.
ಮರುದಿನ ಫೋನ್ ಮೂಲಕ ಪತಿಗೆ ತಲಾಕ್ ನೀಡಿದ್ದಾರೆ. ಇಬ್ಬರನ್ನು ಸೇರಿಸಲು ಖಾಪ್ ಪಂಚಾಯತ್ ಸಾಕಷ್ಟು ಪ್ರಯತ್ನ ನಡೆಸಿದರೂ ಸಫಲವಾಗಲಿಲ್ಲ. ಮೊಹಸಿನಾ ತನ್ನ ನಿರ್ಧಾರವನ್ನು ಬದಲಿಸಲಿಲ್ಲ.
ಆರೀಫ್ ಕುಟುಂಬದವರದು ತಪ್ಪೆಂದು ತೀರ್ಪು ನೀಡಿದ ಖಾಪ್ ಪಂಚಾಯತ್ ಮದುವೆಗೆ ವಧುವಿನ ಕಡೆಯವರು ಖರ್ಚು ಮಾಡಿದ್ದ 2 ಲಕ್ಷ ರೂಪಾಯಿಯನ್ನು ನೀಡುವಂತೆ ವರನ ಕಡೆಯವರಿಗೆ ಮತ್ತು ಮುಂದೆ 3 ವರ್ಷಗಳ ಕಾಲ ಆರೀಫ್ ಕುಟುಂಬದಲ್ಲಿ ಯಾವುದೇ ಮದುವೆ ಕಾರ್ಯ ನಡೆಸಬಾರದು ಎಂದು ಆದೇಶಿಸಿದ್ದಾರೆ.