ಕೇವಲ 2 ರೂಪಾಯಿ ಚಿಲ್ಲರೆ ಹಣಕ್ಕಾಗಿ ಯುವಕನೋರ್ವ ಪ್ರಾಣವನ್ನೇ ಕಳೆದುಕೊಂಡ ದಾರುಣ ಘಟನೆ ಮುಂಬೈನಲ್ಲಿ ನಡೆದಿದೆ. ಮೃತನನ್ನು ಚೇತನ್ ಅರ್ಚಿನೇರ್ಕರ್ ಎಂದು ಗುರುತಿಸಲಾಗಿದೆ.
ಗೋವಾದಿಂದ ವಿಮಾನದಲ್ಲಿ ಮುಂಬೈಗೆ ಆಗಮಿಸಿದ ಚೇತನ್ ವಿಮಾನ ನಿಲ್ದಾಣದಿಂದ ಗೋದ್ರೆಜ್ ಕಾಲೋನಿಯಲ್ಲಿನ ತನ್ನ ಮನೆಗೆ ಆಟೋ ಬಾಡಿಗೆ ಪಡೆದ. ಚೇತನ್ ಮನೆ ಮುಂದೆ ಆಟೋ ನಿಲ್ಲಿಸಿದ ಚಾಲಕ ಕಮಲೇಶ್ ಗುಪ್ತಾ 172 ರೂಪಾಯಿ ಚಾರ್ಜ್ ಮಾಡಿದ. 200 ರೂಪಾಯಿ ಕೊಟ್ಟ ಚೇತನ್ಗೆ ಚಾಲಕ ಕೇವಲ 20 ರೂಪಾಯಿ ನೀಡಿ 8 ರೂಪಾಯಿ ಚಿಲ್ಲರೆ ಇಲ್ಲವೆಂದ. 2 ರೂಪಾಯಿ ತರುತ್ತೇನೆ ಎಂದು ಚೇತನ್ ಮನೆಯೊಳಗೆ ಹೋಗಿದ್ದಾನೆ. ಆಗ ಚೇತನ್ ತಂದೆ ಕೂಡ ಆಟೋ ಚಾಲಕನ ಬಳಿ ಹಣ ಕೇಳಿದ್ದಾನೆ. ಆದರೆ ಆತನಿಗೆ ಬೈದ ಗುಪ್ತಾ ಆಟೋ ಚಾಲನೆ ಮಾಡಿಕೊಂಡು ಹೋಗಿದ್ದಾನೆ.
ಇದರಿಂದ ಕೋಪಗೊಂಡ ಚೇತನ್, ಆಟೋ ಬೆನ್ನಟ್ಟಿ ಅದನ್ನು ಹಿಡಿಯಲು ಯತ್ನಿಸಿದ್ದಾನೆ. ದುರದೃಷ್ಟಾವಶಾತ್ ಆಯ ತಪ್ಪಿ ಕೆಳಕ್ಕೆ ಬಿದ್ದ ಪರಿಣಾಮ ಆಟೋ ಆತನ ಮೇಲೆ ಹರಿದು ಹೋಗಿದೆ.
ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಚೇತನ್ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾನೆ.
ತನ್ನ ಕಣ್ಣಮುಂದೆಯೇ ಮಗ ಅಪಘಾತಕ್ಕೆ ಈಡಾಗುತ್ತಿದ್ದರೂ ಏನೂ ಮಾಡಲಾಗದ ತಂದೆ ಘಟನೆಯಿಂದ ಆಘಾತಕ್ಕೊಳಗಾಗಿದ್ದಾರೆ.
ಆರೋಪಿ ಚಾಲಕ ಗುಪ್ತಾನನ್ನು ಪೊಲೀಸರು ಬಂಧಿಸಿದ್ದಾರೆ.
ಇತ್ತೀಚಿಗಷ್ಟೇ ಮ್ಯಾನೇಜ್ಮೆಂಟ್ ಪದವಿ ಮುಗಸಿದ್ದ ಚೇತನ್ ಸಂದರ್ಶನಕ್ಕೆ ಗೋವಾಗೆ ಹೋಗಿ ಬಂದಿದ್ದ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.