Publish Date: Thu, 13 Jun 2019 (11:48 IST)
Updated Date: Thu, 13 Jun 2019 (11:50 IST)
ನವದೆಹಲಿ : ಗುಜರಾತ್ ಕರಾವಳಿಗೆ ಆತಂಕ ಸೃಷ್ಟಿಸಿದ 'ವಾಯು' ಚಂಡಮಾರುತ ಮಧ್ಯರಾತ್ರಿ ಸಮುದ್ರದತ್ತ ಪಥ ಬದಲಿಸಿದ ಹಿನ್ನಲೆಯಲ್ಲಿ ಗುಜರಾತ್ ಕರಾವಳಿಗೆ 'ವಾಯು' ಚಂಡಮಾರುತ ಅಪ್ಪಳಿಸುವುದಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.
ಚಂಡಮಾರುತ ಪಥ ಬದಲಿಸಿರುವುದರಿಂದ ಗುಜರಾತ್ ಜನರ ಆತಂಕ ದೂರವಾಗಿದ್ದರೂ ಕೂಡ ಗುಜರಾತ್ ಪಶ್ಚಿಮ ಕರಾವಳಿ, ಪರವಲ್ ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. 10,000 ಪ್ರವಾಸಿಗರನ್ನು ರಕ್ಷಣಾ ಸಿಬ್ಬಂದಿ ಸ್ಥಳಾಂತರ ಮಾಡಿದ್ದಾರೆ. ಚಂಡಮಾರುತ ಹಾದುಹೋಗಬಹುದಾಗಿದ್ದ ಪ್ರದೇಶದಲ್ಲಿ ಸುಮಾರು 3 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ವಿಮಾನ, ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.
ಹಾಗೇ ಕರಾವಳಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಈ ಹಿನ್ನಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಏಳುತ್ತಿವೆ. ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಪ್ರವಾಸಿಗರು, ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.