ತಮಿಳುನಾಡು ವಿಧಾನಸಭೆಯಿಂದ ಒಂದು ವಾರದ ಮಟ್ಟಿಗೆ ಅಮಾನತಾಗಿರುವ ಡಿಎಂಕೆ ಪಕ್ಷದ 80 ಸದಸ್ಯರು ತಮ್ಮ ನಾಯಕ ಎಮ್.ಕೆ.ಸ್ಟಾಲಿನ್ ಜತೆಗೂಡಿ ಗುರುವಾರ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ.
ಕಲಾಪದ ಸಂದರ್ಭದಲ್ಲಿ ಕೋಲಾಹಲವನ್ನುಂಟು ಮಾಡಿದ ಹಿನ್ನೆಲೆಯಲ್ಲಿ ಸ್ಪೀಕರ್ ಪಿ. ಧನಪಾಲ್ ಬುಧವಾರ 80 ಡಿಎಂಕೆ ಶಾಸಕರನ್ನು ಅಮಾನತುಗೊಳಿಸಿದ್ದರು. ಆದರೆ ಇಂದು ಅವರೆಲ್ಲ ವಿಧಾನಸಭೆಯನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಇದರಿಂದ ಕೆರಳಿದ ಅವರೆಲ್ಲರೂ ವಿಧಾನಸಭೆ ಮುಂದೆ ಧರಣಿಗೆ ಕುಳಿತಿದ್ದಾರೆ.
ಈ ಹಿನ್ನೆಲೆಯಲ್ಲಿ ವಿಧಾನ ಸಭೆ ಸುತ್ತಮುತ್ತ ಅಪಾರ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ವಿಧಾನಸಭೆಯ ಗೇಟ್ ನಂ4ನ್ನು ಕಾವಲುಗಾರರು ಲಾಕ್ ಮಾಡಿದ್ದಾರೆ. ಸ್ಟಾಲಿನ್ , ಹಿರಿಯ ನಾಯಕ ಎಸ್. ದುರೈ ಮುರುಗನ್ ಮತ್ತು ಇತರರು ವಿಧಾನಸಭೆಯಲ್ಲಿರುವ ಡಿಎಂಕೆ ಚೇಂಬರ್ನ್ನು ಪ್ರವೇಶಿಸಲು ಭದ್ರತಾ ಸಿಬ್ಬಂದಿ ಬಳಿ ಕೇಳಿಕೊಂಡಿದ್ದಾರೆ. ಆದರೆ ಅವರನ್ನು ಒಳಗೆ ಬಿಡಲು ಭದ್ರತಾ ಸಿಬ್ಬಂದಿ ನಿರಾಕರಿಸಿದರು. ಎರಡು ಕಡೆಯವರಲ್ಲಿ ಮಾತಿನ ಚಕಮಕಿ ನಡೆಯಿತು. ನಿಮ್ಮನ್ನು ಒಳಬಿಡಬಾರದೆಂದು ನಮಗೆ ಸೂಚನೆ ನೀಡಲಾಗಿದೆ ಎಂದು ಸಿಬ್ಬಂದಿ ಹೇಳಲಾಗಿ ಲಿಖಿತ ಆದೇಶ ತೋರಿಸುವಂತೆ ಡಿಎಂಕೆ ಶಾಸಕರು ಗಲಾಟೆ ಮಾಡಿದರು.
ನಾವು ಕೇವಲ ಅಮಾನತಾಗಿದ್ದೇವೆ. ಆದರೆ ನಾವು ಶಾಸಕರು. ನಮ್ಮನ್ನು ಏಕೆ ಒಳಗೆ ಬಿಡುತ್ತಿಲ್ಲ ಎಂದು ಅರ್ಥವಾಗುತ್ತಿಲ್ಲ ಎಂದು ಡಿಎಂಕೆ ಶಾಸಕ ಮತ್ತು ಮಾಜಿ ಶಾಲಾ ಶಿಕ್ಷಣ ಸಟಿವ ಥಂಗಮ್ ಥೆನ್ನರಸು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.