ಬಿಜೆಪಿಯ ಮಾಜಿ ನಾಯಕ, ಕ್ರಿಕೆಟ್ ಆಟಗಾರ ನವಜೋತ್ ಸಿಧು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಸಿಎಂ ಅವರನ್ನು ಭೇಟಿಯಾಗಿ ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನಕ್ಕೆ ಆಗ್ರಹಿಸಿದ್ದುದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಪಂಜಾಬ್ ಅಭಿವೃದ್ಧಿಯನ್ನು ಬಯಸುತ್ತದೆ, ನಾಟಕೀಯ ವರ್ತನೆಯನ್ನಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.
ಆಪ್ ನಾಯಕ ಮತ್ತು ನವಜೋತ್ ಸಿಂಗ್ ಸಿಧು ಭೇಟಿಯ ಹಿನ್ನೆಲೆಯಲ್ಲಿ ಎದ್ದಿರುವ ಊಹಾಪೋಹಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಬಿಜೆಪಿ ನಾಯಿ ಶೈನಾ ಎನ್ಸಿ, ಪಂಜಾಬ್ ಜನರು ನಾಟಕೀಯ ವರ್ತನೆಯ ಭಾಗವಾಗಲು ಬಯಸುವುದಿಲ್ಲ. ಅವರು ಬಯಸುವುದು ಕೇವಲ ಉತ್ತಮ ಅಭಿವೃದ್ಧಿ. ಅದು ಸಾಧ್ಯವಾಗುವುದು ಕೇವಲ ಬಿಜೆಪಿ-ಅಕಾಲಿ ದಳ ನೇತೃತ್ವದ ಸರ್ಕಾರದಿಂದ ಮಾತ್ರ ಎಂದು ಹೇಳಿದ್ದಾರೆ.
ಆಗಸ್ಟ್ 12 ರ ರಾತ್ರಿ ಸಿಧು ಕೇಜ್ರಿವಾಲ್ ನಿವಾಸಕ್ಕೆ ತೆರಳಿ ಅವರನ್ನು ಭೇಟಿಯಾಗಿದ್ದರು.
ವರದಿಗಳ ಪ್ರಕಾರ ಕ್ರಿಕೆಟರ್ ಪರಿವರ್ತಿತ ರಾಜಕಾರಣಿ ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ಹೆಸರು ಘೋಷಿಸಬೇಕು ಮತ್ತು ತಮ್ಮ ಪತ್ನಿ ನವಜೋತ್ ಕೌರ್ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಸೀಟು ನೀಡಬೇಕೆಂದು ಆಪ್ ನಾಯಕತ್ವದ ಮುಂದೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವುದಕ್ಕೆ ಆಪ್ ಖಡಾಖಂಡಿತವಾಗಿ ನಿರಾಕರಿಸಿದೆ.
ಜತೆಗೆ ಆಪ್ ಸಂವಿಧಾನ ಒಂದೇ ಕುಟುಂಬದ ಇಬ್ಬರಿಗೆ ಟಿಕೆಟ್ ನೀಡುವುದಕ್ಕೆ ಅವಕಾಶವನ್ನು ನೀಡುವುದಿಲ್ಲ. ಹೀಗಾಗಿ ಅವರ ಪತ್ನಿಗೆ ಸೀಟು ಸಿಗುವುದು ಸಹ ಗಗನ ಕುಸುಮ.
ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಸಿಧು ಕಾಂಗ್ರೆಸ್ ಸೇರಿದಂತೆ ಇತರ ಪಕ್ಷವನ್ನು ಸೇರುವ ದಾರಿಯನ್ನು ಸಹ ತೆರೆದಿಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ.