Publish Date: Fri, 26 May 2017 (10:03 IST)
Updated Date: Fri, 26 May 2017 (10:05 IST)
ನವದೆಹಲಿ: ಭಾರತದ ಮೂಲದ ಮಹಿಳೆ ಉಜ್ಮಾಳನ್ನು ಒಲ್ಲದ ಗಂಡನ ಸೆರೆಯಿಂದ ಬಿಡಿಸಿಕೊಂಡು ಬರಲು ಸಹಾಯ ಮಾಡಿದ ಪಾಕಿಸ್ತಾನ ನ್ಯಾಯಾಲಯಕ್ಕೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಧನ್ಯವಾದ ತಿಳಿಸಿದ್ದಾರೆ.
‘ಪಾಕ್ ವಿದೇಶಾಂಗ ಇಲಾಖೆ ಮತ್ತು ನ್ಯಾಯಾಂಗ ವ್ಯವಸ್ಥೆಯ ಸಹಕಾರದಿಂದಾಗಿ ಉಜ್ಮಾಳನ್ನು ಸುರಕ್ಷಿತವಾಗಿ ಬಲವಂತದಿಂದ ಮದುವೆಯಾದ ಪತಿಯಿಂದ ರಕ್ಷಿಸಲು ಸಾಧ್ಯವಾಯಿತು. ಅಪ್ಪನಂತೆ ಆಕೆಯ ಜತೆ ನಿಂತು ಹೋರಾಡಿದ ವಕೀಲ ಶಹನಾವಾಜ್ ನೂನ್ ಗೆ ನಾನು ಧನ್ಯವಾದ ತಿಳಿಸಲು ಬಯಸುತ್ತೇನೆ’ ಎಂದು ಸುಷ್ಮಾ ಹೇಳಿದ್ದಾರೆ.
ದೆಹಲಿ ಮೂಲದ ವೈದ್ಯೆ ಉಜ್ಮಾಳನ್ನು ಪಾಕ್ ನ ತಾಹಿರ್ ಅಲಿ ಎಂಬಾತ ಬಲವಂತವಾಗಿ ಮದುವೆಯಾಗಿ ಪಾಕ್ ಗೆ ಕರೆದೊಯ್ದಿದ್ದ. ಆತನ ಹಿಡಿತದಿಂದ ತಪ್ಪಿಸಿಕೊಂಡ ಉಜ್ಮಾ ಭಾರತದ ರಾಯಭಾರಿ ಕಚೇರಿಯಲ್ಲಿ ಆಶ್ರಯ ಪಡೆದಿದ್ದಳು. ಅಲ್ಲದೆ, ಪಾಕ್ ನಿಂದ ಭಾರತಕ್ಕೆ ಬರಲು ಸಹಾಯ ಮಾಡುವಂತೆ ಅಲ್ಲಿನ ನ್ಯಾಯಾಲಯದ ಮೊರೆ ಹೋಗಿದ್ದಳು.
ಆಕೆಯ ಹೋರಾಟಕ್ಕೆ ಎರಡೂ ದೇಶಗಳು ಪರಸ್ಪರ ಸಹಕರಿಸಿದ್ದವು. ಅದರಂತೆ ನಿನ್ನೆ ಉಜ್ಮಾ ಭಾರತಕ್ಕೆ ಆಗಮಿಸಿದ್ದಳು. ನಂತರ ಸಚಿವೆ ಸುಷ್ಮಾರನ್ನು ಭೇಟಿಯಾಗಿ ಕಾಲು ಮುಟ್ಟಿ ನಮಸ್ಕರಿಸಿ ತನ್ನ ಧನ್ಯವಾದ ತಿಳಿಸಿದ್ದಳು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ