Publish Date: Sat, 08 Jan 2022 (12:22 IST)
Updated Date: Sat, 08 Jan 2022 (15:15 IST)
ಮುಂಬೈ : ಮತ್ತೊಂದು ಮದುವೆಯಾಗುವ ಆಸೆಯನ್ನು ವ್ಯಕ್ತಪಡಿಸಿದ ತಂದೆಯನ್ನು ಮಗನೇ ರುಬ್ಬುವ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಶಂಕರ್ ರಾಂಭೌ ಬೋರ್ಹಾಡೆ (80) ಮೃತ ವ್ಯಕ್ತಿ. ಶೇಖರ್ ಬೋರ್ಹಾಡೆ (47) ಆರೋಪಿ. ಇವರು ವೈಶಂಪಾಯನಲಿ ಪ್ರದೇಶದ ಹೌಸಿಂಗ್ ಸೊಸೈಟಿಯ ನಿವಾಸಿಯಾಗಿದ್ದರು. ಮಹಾರಾಷ್ಟ್ರದ ಪುಣೆ ಜಿಲ್ಲೆಯ ರಾಜಗುರುನಗರದಲ್ಲಿ ಘಟನೆ ನಡೆದಿದೆ.
ಶಂಕರ್ ಬೋರ್ಹಾಡೆ ಮ್ಯಾಟ್ರಿಮೋನಿಯಲ್ಲಿ ಮರು ಮದುವೆ ಮಾಡಿಕೊಳ್ಳುವ ಸಲುವಾಗಿ ತಮ್ಮ ಹೆಸರನ್ನು ನೋಂದಾಯಿಸಿ ಕೊಂಡಿದ್ದರು. ಈ ವಿಷಯ ತಿಳಿದ ಶೇಖರ್ ಕೋಪಗೊಂಡಿದ್ದ. ಇದರಿಂದಾಗಿ ಆತ ಚಾಕುವಿನಿಂದ ತನ್ನ ತಂದೆಯ ಕತ್ತನ್ನು ಕೊಯ್ದಿದ್ದಾನೆ. ನಂತರ ಸಾವು ಬದುಕಿನ ನಡುವೆ ನರಳುತ್ತಿದ್ದ ತಂದೆಯನ್ನು ನೋಡಿದ ಶೇಖರ್, ತಲೆಗೆ ರುಬ್ಬುವ ಕಲ್ಲಿನಿಂದ ಹೊಡೆದಿದ್ದಾರೆ.
ಬಳಿಕ ಶೇಖರ್ ರಾಜಗುರು ಪೊಲೀಸ್ ಠಾಣೆಗೆ ತೆರಳಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ತನ್ನ ತಂದೆ ಮರು ಮದುವೆಯಾಗಲು ಬಯಸಿದ್ದರು. ಇದರಿಂದಾಗಿ ಕೋಪಗೊಂಡು ಅವರನ್ನು ಹತ್ಯೆಗೈದಿದ್ದೇನೆ ಎಂದು ಹೇಳಿಕೆಯನ್ನು ನೀಡಿದ್ದಾರೆ.