ಬೆಂಗಳೂರು: ಕೇಂದ್ರ ಗೃಹಸಚಿವ ಅಮಿತ್ ಶಾ ನಿನ್ನೆ ಸಂಸತ್ ನಲ್ಲಿ ಪ್ರಧಾನಿ, ಸಿಎಂ ಪದಚ್ಯುತಿ ಮಸೂದೆ ಮಂಡಿಸುತ್ತಿದ್ದಂತೇ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ವಿರೋಧಿಸಿ ಟ್ವೀಟ್ ಮಾಡಿದ್ದಕ್ಕೆ ನೆಟ್ಟಿಗರು ನಿಮಗ್ಯಾಕೆ ಭಯ ಸರ್ ಎಂದಿದ್ದಾರೆ.
ಕ್ರಿಮಿನಲ್ ಆರೋಪಗಳ ಮೇಲೆ ಕನಿಷ್ಠ 5 ವರ್ಷ ಜೈಲು ಶಿಕ್ಷೆಗೆ ಅರ್ಹವಾದ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಮತ್ತು ಸಚಿವರುಗಳು ಬಂಧನವಾದರೆ ಅವರ ಹುದ್ದೆಯಿಂದ ತೆಗೆದು ಹಾಕುವ ಐತಿಹಾಸಿಕ ಮಸೂದೆಯನ್ನು ನಿನ್ನೆ ಗೃಹಸಚಿವ ಅಮಿತ್ ಶಾ ಮಂಡಿಸಿದ್ದಾರೆ.
ಲೋಕಸಭೆಯಲ್ಲಿ ಅಮಿತ್ ಶಾ ಮಸೂದೆ ಮಂಡಿಸುತ್ತಿದ್ದಂತೇ ವಿಪಕ್ಷಗಳು ಸಿಟ್ಟು ನೆತ್ತಿಗೇರಿತ್ತು. ಇನ್ನು, ಸಿಎಂ ಸಿದ್ದರಾಮಯ್ಯ ಕೂಡಾ ಟ್ವೀಟ್ ಮೂಲಕ ಕೇಂದ್ರ ವಿರುದ್ಧ ಕಿಡಿ ಕಾರಿದ್ದಾರೆ. ಈಗಾಗಲೇ ಇಡಿ, ಐಟಿ, ಸಿಬಿಐ ಇಲಾಖೆಯನ್ನು ತನ್ನ ಕೈಗೊಂಬೆಯಂತೆ ಕೇಂದ್ರ ಕುಣಿಸುತ್ತಿದೆ. ವಿರೋಧ ಪಕ್ಷದ ನಾಯಕರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ದಾಳಿ ನಡೆಸುತ್ತಿದೆ.
ಇದೀಗ ಇದೇ ನೆಪ ಮಾಡಿಕೊಂಡು ವಿರೋಧ ಪಕ್ಷಗಳು ಆಡಳಿತದಲ್ಲಿರುವ ಮುಖ್ಯಮಂತ್ರಿಗಳನ್ನು ಪದಚ್ಯುತಿಗೊಳಿಸಿ ಸರ್ಕಾರ ಅಸ್ಥಿರಗೊಳಿಸುವ ಹುನ್ನಾರವಿದು ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಬಹುತೇಕ ಕಾಂಗ್ರೆಸ್ ನಾಯಕರು ಇದೇ ರೀತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು, ಸಿಎಂ ಸಿದ್ದರಾಮಯ್ಯ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ನಿಮಗ್ಯಾಕೆ ಭಯ ಸರ್? ನೀವು ತಪ್ಪು ಮಾಡಿಲ್ಲದೇ ಇದ್ದರೆ ಪದಚ್ಯುತಿ ಮಾಡುವ ಕಾನೂನು ತಂದರೆ ನಿಮಗೆ ಭಯವೇಕೆ? ತಪ್ಪು ಮಾಡಿದವರು ಭಯ ಪಡಬೇಕು. ಇಂತಹದ್ದೊಂದು ಕಾನೂನಿನಿಂದಾದರೂ ಕಳಂಕಿತರು ಉನ್ನತ ಹುದ್ದೆಯಲ್ಲಿ ಮುಂದುವರಿಯುವುದು ತಪ್ಪಿ ರಾಜಕೀಯ ಸ್ವಚ್ಛವಾಗಲಿ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.