Publish Date: Mon, 03 Jul 2023 (13:34 IST)
Updated Date: Mon, 03 Jul 2023 (13:14 IST)
ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭದ್ರತೆ ವಿಚಾರ ತೀವ್ರ ಚರ್ಚೆಯಾಗುತ್ತಿರುವ ಹೊತ್ತಲ್ಲೇ ಸರಣಿ ದರೋಡೆ ಪ್ರಕರಣಗಳು ವರದಿಯಾಗುತ್ತಿವೆ. ಇಂಡಿಯಾ ಗೇಟ್ ಕೂಗಳತೆ ದೂರದಲ್ಲಿರುವ ಪ್ರಗತಿ ಮೈದಾನ ಟನಲ್ ನಲ್ಲಿ ನಡೆದ ದರೋಡೆ ಬಳಿಕ ಹಲವು ಲೂಟಿ ಪ್ರಕರಣಗಳು ವರದಿಯಾಗುತ್ತಿವೆ.
ಮಂಗಳವಾರ ಸಂಜೆ ಉದ್ಯಮಿಯೊಬ್ಬರಿಂದ ಸುಮಾರು 4 ಲಕ್ಷ ರೂ. ಲೂಟಿ ಮಾಡಿರುವ ಘಟನೆ ಕಾಶ್ಮೀರ್ ಗೇಟ್ ಪ್ರದೇಶದಲ್ಲಿ ನಡೆದಿದೆ. ಈ ನಡುವೆ ಲಾಹೋರಿ ಗೇಟ್ ಪ್ರದೇಶದ ಟೆಲಿಯಾನ್ ಮಾರುಕಟ್ಟೆಯಲ್ಲಿ ಮೂವರು ವ್ಯಕ್ತಿಗಳು 5 ಅಂಗಡಿಗಳಲ್ಲಿ ಕಳ್ಳತನ ಮಾಡಿದ್ದಾರೆ.
ಇದಕ್ಕೂ ಮೊದಲು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊರಗಡೆ ಕಸ್ಟಮ್ ಅಧಿಕಾರಿಗಳಂತೆ ನಟಿಸಿ ಇಬ್ಬರು ವ್ಯಕ್ತಿಗಳು ಸೌದಿ ಅರೇಬಿಯಾದಿಂದ ವಾಪಸ್ಸಾದ ಪ್ರಯಾಣಿಕನಿಂದ 4 ಲಕ್ಷ ಮೌಲ್ಯದ ವಿದೇಶಿ ನೋಟುಗಳನ್ನ ಪಡೆದು ವಂಚಿಸಿದ್ದರು.
ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಹೆಸರಿನಲ್ಲಿ ಬೆದರಿಕೆ ಹಾಕಿ ಉದ್ಯಮಿಯಿಂದ 5 ಕೋಟಿ ಪಡೆದು ವಂಚಿಸಲಾಗಿದೆ. ಎಲ್ಲ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು ಸದ್ಯ ಪ್ರಗತಿ ಮೈದಾನ ಟನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನ ಬಂಧಿಸಿದ್ದಾರೆ.