Publish Date: Thu, 21 Nov 2024 (19:59 IST)
Updated Date: Thu, 21 Nov 2024 (20:03 IST)
ನವದೆಹಲಿ: 'ಒಂದಾಗಿದ್ದರೆ ಸುರಕ್ಷಿತವಾಗಿರುತ್ತೇವೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಒಂದು ಘೋಷವಾಕ್ಯ ನೀಡಿದರು. ಅದರಂತೆ ಭಾರತದಲ್ಲಿ ನರೇಂದ್ರ ಮೋದಿ ಹಾಗೂ ಅದಾನಿ ಒಂದಾಗಿದ್ದರೆ ಸುರಕ್ಷಿತವಾಗಿರುತ್ತಾರೆ. ಭಾರತದಲ್ಲಿ ಅದಾನಿಯವರನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿ ಮುಖ್ಯಮಂತ್ರಿಯನ್ನು ಜೈಲಿಗೆ ಕಳುಹಿಸಲಾಗುತ್ತದೆ, ಆದರೆ ₹2000 ಕೋಟಿ ಹಗರಣ ಮಾಡಿದ ಅದಾನಿ ಹೊರಗೆ ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಏಕೆಂದರೆ ಪ್ರಧಾನ ಮಂತ್ರಿಗಳು ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪ ಮಾಡಿದರು.
ಅದಾನಿ ಭಾರತ ಮತ್ತು ಅಮೆರಿಕದಲ್ಲಿ ಅಪರಾಧ ಎಸಗಿದ್ದಾರೆ ಎಂದು ಅಮೆರಿಕದ ತನಿಖೆ ಹೇಳುತ್ತಿದೆ, ಆದರೂ ಭಾರತದಲ್ಲಿ ಅದಾನಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಾವು ಒತ್ತಾಯಿಸುತ್ತಿದ್ದೇವೆ, ಅದಾನಿಯನ್ನು ಇಂದೇ ಬಂಧಿಸಬೇಕು, ಮಾಧವಿ ಬುಚ್ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಮತ್ತು ಅವರ ವಿರುದ್ಧ ತನಿಖೆ ಆಗಬೇಕು.