Publish Date: Tue, 01 Feb 2022 (15:06 IST)
Updated Date: Tue, 01 Feb 2022 (18:09 IST)
ನವದೆಹಲಿ : ಈ ಬಾರಿಯ ಬಜೆಟ್ನ ಮಹತ್ವಪೂರ್ಣ ಘಟ್ಟವೆಂದರೆ ಬಡವರ ಕಲ್ಯಾಣ.
ಪ್ರತಿಯೊಬ್ಬ ಬಡವನಲ್ಲೂ ಸುಸಜ್ಜಿತ ಮನೆ ಇರಬೇಕು, ಅದರಲ್ಲಿ ನಲ್ಲಿಯ ವ್ಯವಸ್ಥೆ, ಶೌಚಾಲಯ, ಗ್ಯಾಸ್ ವ್ಯವಸ್ಥೆ ಈ ಎಲ್ಲಾ ವಿಷಯಗಳ ಬಗ್ಗೆ ವಿಶೇಷ ಗಮನ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ವರ್ಷದ ಬಜೆಟ್ ಬಗೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಆಧುನಿಕತೆ ಬಂದಿದೆ. ಟೆಕ್ನಾಲಜಿ, ಕಿಸಾನ್ ಡ್ರೋನ್, ವಂದೇ ಭಾರತ್ ರೈಲು, ಡಿಜಿಟಲ್ ಕರೆನ್ಸಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡಿಜಿಟಲ್ ಯುನಿಟ್ಗಳು, ಡಿಜಿಟಲ್ ಪರಿಸರ ವ್ಯವಸ್ಥೆ ಬರಲಿದೆ. ಯುವ, ಮಧ್ಯಮ, ಬಡವರು, ದಲಿತರು, ಎನ್ನುವ ತಾರತಮ್ಯ ಇಲ್ಲದೇ ಎಲ್ಲರಿಗೂ ಈ ಸೇವೆ ಲಭ್ಯವಾಗಲಿದೆ ಎಂದು ಪ್ರಧಾನಿ ತಿಳಿಸಿದರು.
ಆಧುನಿಕ ಇಂಟರ್ನೆಟ್ ಸಂಪರ್ಕದ ಬಗೆಯೂ ಅಷ್ಟೇ ಮಹತ್ವ ನೀಡಲಾಗಿದೆ. ದೇಶದ ಎತ್ತರದ ಪ್ರದೇಶಗಳಾದ ಹಿಮಾಲಯ, ಜಮ್ಮು ಕಾಶ್ಮೀರಗಳಲ್ಲಿ ಜನಜೀವನ ಸರಳವಾಗಬೇಕು. ಆ ಪ್ರದೇಶಗಳಿಂದ ಜನರು ಪಲಾಯನಗೈಯುವಂತಾಗಬಾರದು. ಇವುಗಳನ್ನು ಗಮನದಲ್ಲಿರಿಸಿಕೊಂಡೇ ಹೊಸ ಘೋಷಣೆಗಳನ್ನು ಮಾಡಲಾಗಿದೆ.
ಭಾರತದ ಎತ್ತರದ ಪ್ರದೇಶಗಳಿಗಾಗಿ ಪರ್ವತ್ ಮಾಲಾ ಯೋಜನೆ ತರಲಾಗಿದೆ. ಇದು ಸಾರಿಗೆ ಹಾಗೂ ಸಂಪರ್ಕದ ಆಧುನಿಕ ವ್ಯವಸ್ಥೆಯ ನಿರ್ಮಾಣ ಮಾಡುತ್ತದೆ. ಇದರಿಂದ ಗಡಿ ಪ್ರದೇಶದ ಜನರಿಗೂ ದೊಡ್ಡ ಮಟ್ಟದ ಬಲ ದೊರೆಯುತ್ತದೆ ಎಂದು ತಿಳಿಸಿದರು.