Publish Date: Mon, 24 Jun 2024 (11:30 IST)
Updated Date: Mon, 24 Jun 2024 (11:33 IST)
ನವದೆಹಲಿ: ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ಇಂದು ಮೊದಲ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸಂಸತ್ ಗೆ ಬರುವ ಮುನ್ನ ವಿಪಕ್ಷಗಳಿಗೆ ಖಡಕ್ ಸಂದೇಶ ಕೊಟ್ಟಿದ್ದಾರೆ.
ಇಂದು ಮೋದಿ 3.0 ಸರ್ಕಾರದ ಮೊದಲ ಅಧಿವೇಶನ ಪ್ರಾರಂಭವಾಗಿದೆ. ಅಧಿವೇಶನದಲ್ಲಿ ಇಂದು ನೂತನ ಸಂಸದರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಹಂಗಾಮಿ ಸ್ಪೀಕರ್ ಭ್ರಾರ್ತೃಹರಿ ಪ್ರಮಾಣ ವಚನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಆದರೆ ಹಂಗಾಮಿ ಸ್ಪೀಕರ್ ಆಯ್ಕೆ ವಿಚಾರದಲ್ಲಿ ಅಪಸ್ವರವೆತ್ತಿರುವ ವಿಪಕ್ಷಗಳು ಪ್ರತಿಭಟನೆ ನಡೆಸಿದ್ದು, ಪ್ರಮಾಣ ವಚನ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.
ಇನ್ನು, 18 ನೇ ಲೋಕಸಭೆ ಆರಂಭಕ್ಕೆ ಮುನ್ನ ವಿಪಕ್ಷಗಳಿಗೆ ಖಡಕ್ ಸಂದೇಶ ನೀಡಿರುವ ಪ್ರಧಾನಿ ಮೋದಿ, ವಿಪಕ್ಷಗಳು ರಚನಾತ್ಮಕ ಚರ್ಚೆಯಲ್ಲಿ ಪಾಲ್ಗೊಳ್ಳಬೇಕೇ ಹೊರತು, ಗದ್ದಲವೇರ್ಪಡಿಸುವುದರಲ್ಲೇ ಸಮಯ ಪೋಲು ಮಾಡಬಾರದು. ಇದನ್ನು ಜನರೂ ಬಯಸಲ್ಲ ಎಂದಿದ್ದಾರೆ.
ಈ ಬಾರಿ ನೂತನ ಸಂಸತ್ ಆರಂಭದಲ್ಲೇ ವಿಪಕ್ಷಗಳಿಗೆ ನೀಟ್ ಅಕ್ರಮದ ಪ್ರಮುಖ ಅಸ್ತ್ರವೊಂದು ಸಿಕ್ಕಿದೆ. ಇದೇ ವಿಚಾರವನ್ನಿಟ್ಟುಕೊಂಡು ಕಲಾಪದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ತಯಾರಿ ನಡೆಸಿವೆ. ಸ್ಪೀಕರ್ ವಿಚಾರದಲ್ಲಿ ಪ್ರತಿಭಟನೆಯ ಮೂಲಕವೇ ಈ ಲೋಕಸಭೆಯ ಮೊದಲ ಕಲಾಪ ಆರಂಭಗೊಳ್ಳುತ್ತಿರುವುದು ವಿಪರ್ಯಾಸ.