ಇಸ್ಲಾಮಾಬಾದ್: ಭಾರತೀಯ ಸೇನೆ ಕಳೆದ ರಾತ್ರಿ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಅಕ್ರಮಿತ ಕಾಶ್ಮೀರದಲ್ಲಿರುವ 9 ಅಡಗುತಾಣಗಳನ್ನು ಉಡೀಸ್ ಮಾಡಲಾಗಿತ್ತು. ದಾಳಿಯಲ್ಲಿ 100ಕ್ಕೂ ಅಧಿಕ ಉಗ್ರರು ಸಾವಿಗೀಡಾಗಿದ್ದಾರೆ.
ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಕುಟುಂಬದ ಹತ್ತು ಮಂದಿ ಮೃತಪಟ್ಟಿದ್ದಾರೆ. ಅವನ ನಾಲ್ವರು ಸಹಾಯಕರು ಹತ್ಯೆಯಾಗಿದ್ದರು. ಇದಕ್ಕೆ ಮಸೂದ್ ಅಜರ್ ಪ್ರತಿಕ್ರಿಯೆ ನೀಡಿದ್ದಾನೆ.
ನನ್ನ ಕುಟುಂಬದ ಹತ್ತು ಸದಸ್ಯರಿಗೆ ಒಟ್ಟಿಗೆ ಅಲ್ಲಾನ ಆಶೀರ್ವಾದ ಸಿಕ್ಕಿದೆ. ಅವರೆಲ್ಲರೂ ಒಟ್ಟಿಗೆ ಅಲ್ಲಾನ ಅತಿಥಿಗಳಾಗಿದ್ದಾರೆ ಎಂದು ಮೌಲಾನಾ ಮಸೂದ್ ಅಜರ್ ಹೇಳಿಕೊಂಡಿದ್ದಾನೆ.
ಐದು ಮಂದಿ ಮುಗ್ಧ ಮಕ್ಕಳು, ನನ್ನ ಅಕ್ಕ, ಅವಳ ಪತಿ. ನನ್ನ ಸೋದರಳಿಯ ಫಝಿಲ್ ಭಂಜೆ, ನನ್ನ ಪತ್ನಿ ಫಝಿಲಾ, ಸಹೋದರ ಹುಜೈಫಾ ಮತ್ತು ತಾಯಿ ಅಲ್ಲಾನ ಅತಿಥಿಗಳಾಗಿದ್ದಾರೆ ಎಂದು ಹೇಳಿಕೊಂಡಿದ್ದಾನೆ. ನನಗೆ ಪದಗಳಲ್ಲಿ ಹೇಳಲಾಗದಷ್ಟು ದುಃಖವಾಗಿದೆ. ಇಂದು ಹುತಾತ್ಮರಾಗುತ್ತಿರುವ ಅಲ್ಲಾಹನ ಈ 14 ಅತಿಥಿಗಳಲ್ಲಿ ನಾನೂ ಸೇರಬೇಕೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾನೆ.
1994 ರಲ್ಲಿ ಭಾರತದಲ್ಲಿ ಬಂಧಿಸಲ್ಪಟ್ಟಿದ್ದ ಉಗ್ರ ಮಸೂದ್, ಏರ್ ಇಂಡಿಯಾ ಐಸಿ 814 ವಿಮಾನ ಅಪಹರಣದ ನಂತರ ಬಿಡುಗಡೆಯಾಗಿದ್ದ. ಈತನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ಅಂತಾರರಾಷ್ಟ್ರೀಯ ಭಯೋತ್ಪಾದಕರ ಪಟ್ಟಿಗೆ ಸೇರಿಸಿದೆ. 2001ರ ಸಂಸತ್ತಿನ ದಾಳಿ, 2008ರ ಮುಂಬೈ ದಾಳಿ, 2016ರ ಪಠಾಣ್ಕೋಟ್ ದಾಳಿ ಮತ್ತು 2019ರ ಪುಲ್ವಾಮಾ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಅನೇಕ ಭಯೋತ್ಪಾದಕ ದಾಳಿಗಳ ಹಿಂದಿನ ಪಿತೂರಿಯಲ್ಲಿ ಈತ ಭಾಗಿಯಾಗಿದ್ದಾನೆ.