ರಾಷ್ಟ್ರೀಯ ಹಿತಾಸಕ್ತಿಯ ಸುರಕ್ಷಿತ ಹಳಿಗಳ ಮೇಲೆ ಪ್ರಧಾನಿ ಮೋದಿ ಸೂಪರ್ ಫಾಸ್ಟ್ ವಿಕಾಸದ ರೈಲನ್ನು ಓಡಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಮೋದಿ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪುಣೆಯಲ್ಲಿ ವಿಕಾಸ ಪರ್ವ ಸಭೆಯನ್ನುದ್ದೇಶಿಸಿ ಮಾತನ್ನಾಡುತ್ತಿದ್ದ ನಖ್ವಿ, ಅಭಿವೃದ್ಧಿ ಪ್ರಕ್ರಿಯೆಯನ್ನು ತಳಮಟ್ಟದಿಂದ ಮೇಲೆತ್ತಲು ನಾವು ಅತಿ ವೇಗದಲ್ಲಿ ಕೆಲಸ ಮಾಡಬೇಕಿದೆ. ಮಧ್ಯವರ್ತಿಗಳು ಮತ್ತು ದಲ್ಲಾಳಿಗಳು ವ್ಯವಸ್ಥೆಯನ್ನು ತೊಡೆದುಹಾಕಬೇಕಿದೆ ಎಂದಿದ್ದಾರೆ.
ದೇಶದ ಅಂತರ್ಗತ ಮತ್ತು ಸಂಪೂರ್ಣ ಅಭಿವೃದ್ಧಿಯನ್ನು ವಾಸ್ತವವಾಗಿಸಲು ಮೋದಿ ಸರ್ಕಾರ ಪ್ರಯತ್ನಿಸುತ್ತಿದೆ. ನಮ್ಮ ಅಭಿವೃದ್ಧಿ ಮಾದರಿ ಸಮಾಜದ ಕೊನೆಯ ವ್ಯಕ್ತಿಗೆ ವಿಕಾಸದ ಬೆಳಕನ್ನು ನೀಡುವುದು ಎಂದು ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವರಾದ ನಖ್ವಿ ಹೇಳಿದ್ದಾರೆ.
ಮೋದಿ ಅವರು ಅಭಿವೃದ್ಧಿಯ ಬ್ರ್ಯಾಂಡ್ ಮತ್ತು ಜಗತ್ತಿನಾದ್ಯಂತ ವಿಶ್ವಾಸದ ಪ್ರತೀಕವಾಗಿ ಹೊರಹೊಮ್ಮಿದ್ದಾರೆ ಎಂದು ನಖ್ವಿ ಪ್ರತಿಪಾದಿಸಿದ್ದಾರೆ.