Publish Date: Fri, 19 Apr 2024 (09:15 IST)
Updated Date: Fri, 19 Apr 2024 (09:28 IST)
ಚೆನ್ನೈ: ಲೋಕಸಭಾ ಚುನಾವಣೆ 2024 ರ ಮೊದಲ ಹಂತದ ಚುನಾವಣೆ ಇಂದು ದೇಶದ 21 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಲ್ಲಿ ನಡೆಯುತ್ತಿದೆ. ತಮಿಳುನಾಡಿನ ಚೆನ್ನೈನಲ್ಲಿ ಇಂದು ನಟ ಅಜಿತ್ ಕುಮಾರ್, ರಜನೀಕಾಂತ್ ಬೆಳ್ಳಂ ಬೆಳಿಗ್ಗೆಯೇ ಬಂದು ವೋಟ್ ಮಾಡಿದ್ದಾರೆ.
ಚೆನ್ನೈನಲ್ಲಿ ನಟ ಅಜಿತ್ ಕುಮಾರ್ ತಮ್ಮ ಪೋಲಿಂಗ್ ಬೂತ್ ಗೆ ಬೆಳ್ಳಂ ಬೆಳಿಗ್ಗೆ 6.45 ಕ್ಕೇ ಭೇಟಿ ಕೊಟ್ಟು ಮೊದಲನೆಯವರಾಗಿ ವೋಟ್ ಮಾಡಿದ್ದಾರೆ. ಅಜಿತ್ ಮತದಾನ ಮಾಡಲು ಬಂದಾಗ ಅಭಿಮಾನಿಗಳ ನೂಕು ನುಗ್ಗಲು ಉಂಟಾಗಿದೆ. ಮತದಾನ ಮಾಡಿದ ಬಳಿಕ ಕಾರಿನತ್ತ ತೆರಳಲು ಅವರು ಹರಸಾಹಸಪಡಬೇಕಾಯಿತು.
ಇನ್ನೊಂದೆಡೆ ಸೂಪರ್ ಸ್ಟಾರ್ ರಜನೀಕಾಂತ್ ಕೂಡಾ ಚೆನ್ನೈನ ತಮ್ಮ ಮತಗಟ್ಟೆಯಲ್ಲಿ ವೋಟ್ ಮಾಡಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ರಜನೀಕಾಂತ್ ಎಲ್ಲರೂ ತಪ್ಪದೇ ಮತದಾನ ಮಾಡಿ. ನಾನು ಮತದಾನೆ ಮಾಡಿ ಎನ್ನುವುದು ಗೌರವದ ವಿಷಯ. ನಾನು ಮತದಾನ ಮಾಡಿಲ್ಲ ಎನ್ನುವುದು ಗೌರವವಲ್ಲ. ಎಲ್ಲರೂ ಕಡ್ಡಾಯವಾಗಿ ಬಂದು ವೋಟ್ ಮಾಡಿ ಎಂದಿದ್ದಾರೆ.
ಸಾಮಾನ್ಯವಾಗಿ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಡಿಎಂಕೆ ನಡುವೆ ನೇರ ಸ್ಪರ್ಧೆಯಿರುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಅಣ್ಣಾಮಲೈ ನೇತೃತ್ವದಲ್ಲಿ ಬಿಜೆಪಿ ಕೂಡಾ ಕೆಲವೊಂದು ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದೆ. ಇನ್ನು, ಇಂದು ಮೊದಲನೇ ಹಂತದ ಮತನಾದ ಪ್ರಕ್ರಿಯೆ ನಡೆಯುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಎಕ್ಸ್ ಖಾತೆಯಲ್ಲಿ ಜನರಿಗೆ ಸಂದೇಶ ನೀಡಿದ್ದು, ಪ್ರತಿಯೊಬ್ಬರೂ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ. ಮತದಾನ ಎನ್ನುವುದು ಪ್ರತಿಯೊಬ್ಬ ಜನರ ಧ್ವನಿಯಾಗಿದೆ ಎಂದಿದ್ದಾರೆ.