Select Your Language

Notifications

webdunia
webdunia
webdunia
Saturday, 12 April 2025
webdunia

ವಕೀಲರ ಜೀವ ಇತರರಿಗಿಂತ ಅಮೂಲ್ಯವೇನೂ ಅಲ್ಲ: 'ಸುಪ್ರೀಂ'

ಪಿಐಎಲ್
ನವದೆಹಲಿ , ಬುಧವಾರ, 15 ಸೆಪ್ಟಂಬರ್ 2021 (07:41 IST)
ನವದೆಹಲಿ : ಕೋವಿಡ್ ಅಥವಾ ಇತರ ಕಾರಣಗಳಿಂದ ಮೃತಪಟ್ಟ 60 ವರ್ಷದೊಳಗಿನ ವಕೀಲರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಒದಗಿಸುವಂತೆ ಕೇಂದ್ರ ಮತ್ತು ಇತರರಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿತು.

ವಕೀಲರ ಜೀವನವು ಇತರರಿಗಿಂತ 'ಹೆಚ್ಚು ಅಮೂಲ್ಯ' ಎಂದು ಹೇಳಲಾಗದು ಎಂದು ನ್ಯಾಯಾಲಯ ಈ ವೇಳೆ ತಿಳಿಸಿದೆ.
ಈ ಕುರಿತ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ವಿಕ್ರಂನಾಥ್, ಬಿ.ವಿ.ನಾಗರತ್ನ ಅವರನ್ನು ಒಳಗೊಂಡ ನ್ಯಾಯಪೀಠವು, ವಕೀಲರು 'ಬೋಗಸ್' ಪಿಐಎಲ್ಗಳನ್ನು ಹಾಕುವುದನ್ನು ನಾವು ಬೆಂಬಲಿಸುವುದಿಲ್ಲ. ಇದು 'ಪ್ರಚಾರ ಹಿತಾಸಕ್ತಿಯ ಅರ್ಜಿ' ಆಗಿದೆ ಎಂದು ಪೀಠ ಬೇಸರ ವ್ಯಕ್ತಪಡಿಸಿತು.
ಕೋವಿಡ್ ಪಿಡುಗಿನಿಂದ ದೇಶದಲ್ಲಿ ಹಲವಾರು ಜನರು ಮೃತಪಟ್ಟಿದ್ದಾರೆ. ಅವರ ಕುಟುಂಬಗಳಿಗೆ ಪರಿಹಾರ ವಿತರಿಸುವ ಮಾರ್ಗಸೂಚಿಗಳನ್ನು ರೂಪಿಸುವ ಕುರಿತು ಸುಪ್ರೀಂ ಕೋರ್ಟ್ ಈಗಾಗಲೇ ತೀರ್ಪು ನೀಡಿದೆ ಎಂದು ಪೀಠ ತಿಳಿಸಿತು. ಅರ್ಜಿ ಸಲ್ಲಿಸಿದ ವಕೀಲ ಪ್ರದೀಪ್ ಕುಮಾರ್ ಯಾದವ್ ಅವರನ್ನು ಕುರಿತು ಪೀಠವು, 'ಸಮಾಜದ ಇತರ ಜನರು ಮುಖ್ಯವಲ್ಲವೇ' ಎಂದು ಪ್ರಶ್ನಿಸಿತು.
'ಇದು ಪ್ರಚಾರ ಹಿತಾಸಕ್ತಿಯ ಅರ್ಜಿಯಲ್ಲದೆ ಮತ್ತೇನೂ ಅಲ್ಲ. ನೀವು ಕಪ್ಪು ಕೋಟ್ ಧರಿಸಿರುವ ಕಾರಣಕ್ಕೆ ನಿಮ್ಮ ಜೀವವು ಇತರರಿಗಿಂತ ಹೆಚ್ಚು ಅಮೂಲ್ಯ ಎಂದು ಭಾವಿಸುವುದು ಸರಿಯಲ್ಲ' ಎಂದು ಹೇಳಿದ ಪೀಠ, 'ವಕೀಲರು ನಕಲಿ ಪಿಐಎಲ್ಗಳನ್ನು ಸಲ್ಲಿಸುವುದನ್ನು ನಾವು ಪ್ರೋತ್ಸಾಹಿಸುವುದಿಲ್ಲ' ಎಂದಿತು.
ಅರ್ಜಿ ಸಲ್ಲಿಸಿದ್ದ ವಕೀಲರಿಗೆ ₹ 10 ಸಾವಿರ ವೆಚ್ಚವನ್ನು ವಾರದೊಳಗೆ ಸುಪ್ರೀಂಕೋರ್ಟ್ನ ವಕೀಲರ ಸಂಘಕ್ಕೆ ಪಾವತಿಸಬೇಕು ಎಂದು ಸೂಚಿಸಿದ ಪೀಠ, ಅರ್ಜಿಯನ್ನು ವಜಾಗೊಳಿಸಿತು.


Share this Story:

Follow Webdunia kannada

ಮುಂದಿನ ಸುದ್ದಿ

ಕೆವೈಸಿ ನೆಪದಲ್ಲಿ ವಂಚನೆ: ಸಾರ್ವಜನಿಕರಿಗೆ RBI ನಿಂದ ಮಹತ್ವದ ಸೂಚನೆ