ಜಲ್ಲಿಕಟ್ಟು : ತಮಿಳುನಾಡಿನಲ್ಲಿ ತಾರಕ್ಕೇರಿದ ಪ್ರತಿಭಟನೆ
ಚೆನ್ನೈ , ಗುರುವಾರ, 19 ಜನವರಿ 2017 (14:12 IST)
ತಮಿಳುನಾಡಿನಲ್ಲಿ ಜಲ್ಲಿಕಟ್ಟು ಪರ ಹೋರಾಟ ತಾರಕ್ಕೇರಿದ್ದು ಮರೀನಾ ಸಮುದ್ರ ತೀರದಲ್ಲಿ ಸೇರಿರುವ ಲಕ್ಷಾಂತರ ಜನರ ಪ್ರತಿಭಟನೆ ಮೂರನೆಯ ದಿನಕ್ಕೆ ಕಾಲಿಟ್ಟಿದೆ.ಜಲ್ಲಿಕಟ್ಟು ಮೇಲಿನ ನಿಷೇಧ ತೆರವುಗೊಳಿಸುವಂತೆ ಆಗ್ರಹಿಸುತ್ತಿರುವ ಪ್ರತಿಭಟನಾಕಾರರು ನಿಷೇಧಕ್ಕೆ ಕಾರಣವಾದ ಪೆಟಾ ಸಂಸ್ಥೆಯನ್ನೇ ನಿಷೇಧಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಪೊಂಗಲ್ ಹಬ್ಬದ ನಂತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು ಮಧುರೈ, ಚೆನ್ನೈ, ಸೇಲಂ ಮತ್ತು ಕೊಯಂಬತ್ತೂರಿನಲ್ಲಿ ಸಹ ಪ್ರತಿಭಟನೆ ಜೋರಾಗಿದೆ.
ಜಲ್ಲಿಕಟ್ಟಿಗೆ ಅವಕಾಶ ನೀಡಬೇಕು, ಪ್ರಾಣಿ ದಯಾ ಸಂಘಟನೆ (ಪೇಟಾ) ನಿಷೇಧಿಸಬೇಕು ಮತ್ತು ಬರ ಪೀಡಿತ ಪ್ರದೇಶದ ರೈತರಿಗೆ ಪರಿಹಾರ ನೀಡಬೇಕು- ಈ ಎಲ್ಲ ಬೇಡಿಕೆಗಳನ್ನು ಪೂರೈಸಿದರೆ ಮಾತ್ರ ತಾವು ಪ್ರತಿಭಟನೆ ಕೈ ಬಿಡುವುದಾಗಿ ಪ್ರತಿಭಟನಾಕಾರರು ಹೇಳಿದ್ದಾರೆ.
ಪ್ರತಿಭಟನಾ ನಿರತರಲ್ಲಿ ಐಟಿ ಉದ್ಯೋಗಿಗಳು, ಕಾರ್ಮಿಕರು, ವಿದ್ಯಾರ್ಥಿಗಳು ಇದ್ದಾರೆ.
ತಮಿಳು ಸಿನಿಮಾ ನಟರಾದ ವಿಜಯ್, ಸಿಂಬು, ಸೂರ್ಯ ಸೇರಿದಂತೆ ನಿರ್ದೇಶಕರಾದ ಅಮೀರ್, ಕಾರ್ತಿಕ್ ಸುಬ್ಬರಾಜ್ ಮೊದಲಾದವರು ಈ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ಇನ್ನೊಂದೆಡೆ ಜಲ್ಲಿಕಟ್ಟಿಗೆ ಅನುಮತಿ ನೀಡಿ ಸುಗ್ರಿವಾಜ್ಞೆ ಹೊರಡಿಸಿ ಎಂದು ಪ್ರಧಾನಿ ಬಳಿ ಮನವಿ ಮಾಡಿಕೊಳ್ಳಲು ಹೋಗಿದ್ದ ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಬರಿಗೈಯಲ್ಲಿ ಹಿಂತಿರುಗಿದ್ದಾರೆ.
ಪ್ರಕರಣ ಕೋರ್ಟ್ನಲ್ಲಿರುವುದರಿಂದ ಕೇಂದ್ರದಿಂದ ಏನೂ ಮಾಡಲಾಗುವುದಿಲ್ಲ. ಕೇಂದ್ರ ಮಧ್ಯ ಪ್ರವೇಶಿಸಿದೆ ಕಾನೂನು ಸಮಸ್ಯೆ ಉಂಟಾಗುತ್ತದೆ ಎಂದು ಪ್ರಧಾನಿ ಕೈ ಚೆಲ್ಲಿದ್ದಾರೆ.
ಮುಂದಿನ ಸುದ್ದಿ