ನವದೆಹಲಿ: ಭಾರತ ಮತ್ತು ಪಾಕ್ ಗಡಿಯಲ್ಲಿ ಉದ್ವಿಗ್ನಿ ಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಉಗ್ರರನ್ನು ಸಾಕಿ ಸಲಹುತ್ತಿರುವ ಪಾಕ್ಗೆ ಭಾರತವು ಮತ್ತಷ್ಟು ಆಘಾತವನ್ನು ನೀಡುತ್ತಿದೆ.
ಏ.22ರಂದು ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಎಲ್ಲಾ ರೀತಿಯ ಸಂಬಂಧಕ್ಕೆ ತಿಲಾಂಜಲಿ ಇಡಲಾಗಿದೆ. ಈಗಾಗಲೇ ಸಿಂಧೂ ನದಿಯ ನೀರು ಸ್ಥಗಿತ ಮಾಡಿರುವ ಭಾರತ ಇದೀಗ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ ನೀಡಿದೆ. ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಬಾಗ್ಲಿಹಾರ್ ಅಣೆಕಟ್ಟು ಸೇರಿದಂತೆ 2 ಅಣೆಕಟ್ಟುಗಳ ನೀರನ್ನೂ ನಿಲ್ಲಿಸಲು ಭಾರತ ನಿರ್ಧರಿಸಿದೆ.
ಚೆನಾಬ್ ನದಿಯ ಬಾಗ್ಲಿಹಾರ್ ಅಣೆಕಟ್ಟಿನ ಮೂಲಕ ನೀರಿನ ಹರಿವನ್ನು ಭಾರತವುಸ್ಥಗಿತಗೊಳಿಸಿದೆ. ಇದಲ್ಲದೆ ಝೀಲಂ ನದಿಯ ಕಿಶನ್ಗಂಗಾ ಅಣೆಕಟ್ಟಿನಲ್ಲೂ ಇದೇ ರೀತಿಯ ಕ್ರಮಗಳನ್ನು ಯೋಜಿಸುತ್ತಿದೆ. ಈ ಎರಡೂ ಅಣೆಕಟ್ಟುಗಳು ಜಲವಿದ್ಯುತ್ ಕೇಂದ್ರಗಳಾಗಿದ್ದು, ಜಮ್ಮುವಿನ ರಾಂಬನ್ನಲ್ಲಿರುವ ಬಾಗ್ಲಿಹಾರ್ ಮತ್ತು ಉತ್ತರ ಕಾಶ್ಮೀರದ ಕಿಶನ್ಗಂಗಾ - ಭಾರತಕ್ಕೆ ನೀರು ಬಿಡುಗಡೆಯ ಸಮಯವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ನೀಡುತ್ತವೆ.
ಈ ಹಿಂದೆ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ನಡೆದ ಸಿಂಧೂ ಜಲ ಒಪ್ಪಂದವು 1960 ರಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧೂ ನದಿ ಮತ್ತು ಅದರ ಉಪನದಿಗಳ ಬಳಕೆಯನ್ನು ನಿಯಂತ್ರಿಸುತ್ತಿದೆ. ಬಾಗ್ಲಿಹಾರ್ ಅಣೆಕಟ್ಟು ಎರಡು ನೆರೆಹೊರೆಯವರ ನಡುವೆ ದೀರ್ಘಕಾಲದ ವಿವಾದದ ವಿಷಯವಾಗಿದೆ. ಪಾಕಿಸ್ತಾನ ಹಿಂದೆ ಇದೇ ವಿಚಾರವಾಗಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯನ್ನು ಕೋರಿತ್ತು.