Publish Date: Wed, 14 Jun 2023 (09:31 IST)
Updated Date: Wed, 14 Jun 2023 (10:33 IST)
ನವದೆಹಲಿ : ಬೆಳೆ ಹಾನಿ, ಬರಗಾಲ, ಅತಿವೃಷ್ಠಿ ಸೇರಿದಂತೆ ವಿವಿಧ ಪ್ರಕೃತಿ ವಿಕೋಪಗಳಿಗೆ ನೀಡುವ ಪರಿಹಾರ ಧನವನ್ನು ಹೆಚ್ಚಿಸುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿದ್ದಾರೆ.
ವಿವಿಧ ರಾಜ್ಯಗಳ ವಿಪತ್ತು ನಿರ್ವಹಣಾ ಸಚಿವರ ಜೊತೆಗೆ ಅಮಿತ್ ಶಾ ಸಭೆ ಮಂಗಳವಾರ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಭಾಗಿಯಾದ ಸಚಿವರು ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ಬರಗಾಲ, ಅತಿವೃಷ್ಠಿ, ಮಳೆ ಹಾನಿ, ಬೆಳೆ ಪರಿಹಾರ ಮೊತ್ತ ಕಡಿಮೆ ಇದ್ದು ಅದನ್ನು ಪರಿಷ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಭೆ ಬಳಿಕ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಅಂಶಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ. ಮೊದಲನೇಯದಾಗಿ ಮಳೆ ಆಶ್ರಿತ ಪ್ರತಿ ಹೆಕ್ಟೇರ್ ಭೂಮಿಗೆ 8,500 ರೂ. ಬೆಳೆ ಹಾನಿ ನೀಡಲಾಗುತ್ತಿದೆ. ಅದನ್ನು 20,000 ರೂ. ಗೆ ಹೆಚ್ಚಿಸಬೇಕು. ನೀರಾವರಿ ಭೂಮಿಗೆ 17,000 ರೂ. ನೀಡಲಾಗುತ್ತಿದೆ. ಇದನ್ನು 35,000 ರೂ. ಗೆ ಹೆಚ್ಚಿಸಬೇಕು. ತೋಟಗಾರಿಕೆ ಬೆಳೆ ಹಾನಿಗೆ 22,000 ರೂ. ನಿಂದ 49,000 ರೂ. ಹೆಚ್ಚಿಸಲು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.