ಹುಬ್ಬಳ್ಳಿ: ಮಾನ ಮರ್ಯಾದೆಯಿದ್ದರೆ ಶಿಕ್ಷಣ ಸಚಿವ ತನ್ವೀರ್ ಸೇಠ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬರಬೇಕು ಎಂದು ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಆಗ್ರಹಿಸಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜವಾಬ್ದಾರಿ ಸ್ಥಾನದಲ್ಲಿರುವ ತನ್ವೀರ್ ಸೇಠ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅರೆನಗ್ನ ಚಿತ್ರ ವೀಕ್ಷಿಸಿದ್ದು ಸಮಸ್ತ ನಾಡಿನ ಜನತೆಯೇ ನೋಡಿದೆ. ಹಾಗಿದ್ದಾಗಲೂ ಅವರು ತಾನೇನೂ ತಪ್ಪೇ ಮಾಡಿಲ್ಲ ಎಂದು ಮಾಧ್ಯಮದ ಮೇಲೆಯೇ ದೂರು ದಾಖಲಿಸಿ ಬ್ಲ್ಯಾಕ್ ಮೇಲ್ ತಂತ್ರ ಅನುಸರಿಸುತ್ತಿದ್ದಾರೆ. ಅರೆ ನಗ್ನ ಚಿತ್ರವನ್ನು ಒಂದು ಸೆಕೆಂಡ್ ನೋಡಲಿ ಅಥವಾ ಒಂದು ತಾಸು ನೋಡಲಿ, ಸಾರ್ವಜನಿಕ ಕಾರ್ಯಕ್ರಮದಲ್ಲಿ ಅದನ್ನು ನೋಡಿದ್ದು ಮಹಾ ಅಪಾರಾಧ. ಈ ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮಹದಾಯಿ ಯೋಜನೆ ಅನುಷ್ಠಾನದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯಉಡಾಫೆಯಿಂದ ವರ್ತಿಸುತ್ತಿದ್ದಾರೆ. ಅವರು ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲು ತಂತ್ರ ನಡೆಸುತ್ತಿದ್ದಾರೆ. ಮೂರು ರಾಜ್ಯದ ಮುಖ್ಯಮಂತ್ರಿಗಳು ಮಹರಾಷ್ಟ್ರದಲ್ಲಿ ಸಭೆ ಸೇರಿ ಮಹದಾಯಿ ಕುರಿತು ಚರ್ಚಿಸಲು ತೀರ್ಮಾನನ ಕೈಗೊಂಡಿದ್ದಾಗ, ಗೋವಾ ಕಾಂಗ್ರೆಸ್ಸಿಗರು ಪಾದಯಾತ್ರೆ ನಡೆಸಿ ಅಲ್ಲಿಯ ಮುಖ್ಯಮಂತ್ರಿಗಳಿಗೆ ಸಭೆಯಲ್ಲಿ ಪಾಲ್ಗೊಳ್ಳಬಾರದೆಂದು ಒತ್ತಡ ಹೇರಿದರು. ಆಗ ಸಿದ್ದರಾಮಯ್ಯ ಗೋವಾ ಕಾಂಗ್ರೆಸ್ ಜೊತೆ ಮಾತನಾಡಿ ಚರ್ಚಿಸಬಹುದಿತ್ತು. ಅದ್ಯಾವುದನ್ನೂ ಮಾಡದೆ ಈಗ ಮತ್ತೆ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು ಎಂದು ಹೇಳುತ್ತಿರುವುದು ಉಡಾಫೆಯ ರಾಜಕಾರಣ ಎಂದರು.