Publish Date: Sun, 10 Apr 2022 (13:53 IST)
Updated Date: Sun, 10 Apr 2022 (18:57 IST)
ಅಮರಾವತಿ : ರಾಮನವಮಿ ವಿಶೇಷ ದಿನದಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿಯ ತಿರುಮಲ ವೆಂಕಟೇಶ್ವರ ಸನ್ನಿಧಿಗೆ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಭೇಟಿ ನೀಡಿ, ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕರ್ನಾಟಕದ ರಾಜ್ಯಪಾಲರಾದ ನಂತರ ಎರಡನೇ ಬಾರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಜ್ಯಪಾಲರು, ದೇಶದಲ್ಲಿ ಸುಖ, ಸಮೃದ್ಧಿ, ಶಾಂತಿ ತುಂಬಿರಲಿ ಹಾಗೂ ಇಡೀ ವಿಶ್ವದಲ್ಲೇ ದೇಶದ ಹೆಸರು ಪಸರಿಸಲೆಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.
ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (ಟಿಟಿಡಿ) ಅಧಿಕಾರಿಗಳು ಮತ್ತು ಅರ್ಚಕರು ರಾಜ್ಯಪಾಲರನ್ನು ಸ್ವಾಗತಿಸಿದರು. ಪೂಜೆಯ ನಂತರ ರಂಗಾನಾಯಕುಲ ಮಂಟಪದಲ್ಲಿ ಶ್ರೀವಾರಿ ವಸ್ತ್ರವನ್ನು ನೀಡಿ ರಾಜ್ಯಪಾಲರನ್ನು ಗೌರವಿಸಿದರು.
ತಿಮ್ಮಪ್ಪ ಸ್ವಾಮಿ ಪ್ರಸಾದವನ್ನು ಗೌರವಾನ್ವಿತ ರಾಜ್ಯಪಾಲರಿಗೆ ದೇವಾಲಯದ ವತಿಯಿಂದ ನೀಡಲಾಯಿತು. ಈ ಸಂದರ್ಭದಲ್ಲಿ ತಿರುಪತಿ ವಿಶೇಷ ಅಧಿಕಾರಿ ಲೋಕನಾಥನ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.