Publish Date: Mon, 17 Apr 2017 (10:58 IST)
Updated Date: Mon, 17 Apr 2017 (11:03 IST)
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಶಶಿಕಲಾ ಬಣಕ್ಕೆ ಮತ್ತಷ್ಟು ಸಂಕಷ್ಟ ಎದುರಾಗಿದೆ ಚುನಾವಣಾ ಆಯೋಗ ಸ್ಥಗಿತಗೊಳಿಸಿರುವ ಅಣ್ಣಾಡಿಎಂಕೆಯ ಎರಡು ಎಲೆ ಚಿಹ್ನೆಗಾಗಿ ಮಧ್ಯವರ್ತಿ ಮೂಲಕ ಚುನಾವಣಾ ಆಯೋಗಕ್ಕೆ ಲಂಚ ನೀಡಿಕೆ ಆರೋಪದಡಿ ಅಣ್ಣಾಡಿಎಂಕೆ ಮುಖಂಡ ಟಿಟಿವಿ ದಿನಕರನ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
1.5 ಕೋಟಿ ರೂ. ಹಣದೊಂದಿಗೆ ಮಧ್ಯವರ್ತಿ ಚಂದ್ರಶೇಖರ್ ಎಂಬುವವನನ್ನ ಬಂಧಿಸಿರುವ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ದಿನಕರನ್`ಗೆ ಸಮನ್ಸ್ ಜಾರಿ ಮಾಡಿದ್ದಾರೆ. ಬಂಧಿತನಿಂದ ಬಿಎಂಡಬ್ಲ್ಯೂ ಮತ್ತು ಮರ್ಸಿಡಿಸ್ ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಟಿಟಿವಿ ದಿನಕರನ್ ಶಶಿಕಲಾ ಸೋದರಳಿಯನಾಗಿದ್ದು, ಚುನಾವಣಾ ಆಯೋಗ ಸ್ಥಗಿತಗೊಳಿಸಿರುವ ಎರಡು ಎಲೆ ಚಿಹ್ನೆಯನ್ನ ಪಡೆಯಲು ಮಧ್ಯವರ್ತಿ ಮೂಲಕ ಲಂಚದ ಆಮಿಷವೊಡ್ಡಿದ್ದ. ಒಂದೊಮ್ಮೆ ಶಶಿಕಲಾ ಬಣಕ್ಕೆ ಚಿಹ್ನೆ ದೊರೆತರೆ 60 ಕೋಟಿ ರೂ. ನೀಡುವುದಾಗಿ ದಿನಕರನ್, ಮಧ್ವರ್ತಿ ಮೂಲಕ ಲಂಚದ ಆಫರ್ ಕೊಟ್ಟಿದ್ದ ಎಂಬ ಆರೋಪ ಕೇಳಿಬಂದಿದೆ.
ಜಯಲಲಿತಾ ನಿಧನದ ಬಳಿಕ ತೆರವಾಗಿದ್ದ ಆರ್.ಕೆ. ನಗರ ಉಪಚುನಾವಣೆಯಲ್ಲಿ ಪನ್ನೀರ್ ಸೆಲ್ವಂ ಬಣ ಮತ್ತು ಶಶಿಕಲಾ ಬಣದ ನಡುವೆ ಎರಡು ಚಿಹ್ನೆಗಾಗಿ ಪೈಪೋಟಿ ಏರ್ಪಟ್ಟ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಚಿಹ್ನೆಯನ್ನ ಸ್ಥಗಿತಗೊಳಿಸಿ ಇಬ್ಬರಿಗೂ ಬೇರೆ ಬೇರೆ ಚಿಹ್ನೆ ನೀಡಿತ್ತು. ಬಳಿಕ 89 ಕೋಟಿ ರೂ. ಹಣ ಈ ಕ್ಷೇತ್ರದಲ್ಲಿ ಹಂಚಿಕೆಯಾಗಿದೆ ಎಂಬ ಾರೋಪದ ಬಳಿಕ ಚುನಾವಣೆಯನ್ನೇ ರದ್ದು ಮಾಡಲಾಯ್ತು.