ಅಪ್ರಾಪ್ತ ಬಾಲಕನನ್ನು ಅಪಹರಣ ಮಾಡಿ, ಆತನ ಮೇಲೆ ಗುದಮೈಥುನ ಮಾಡಿ ಹತ್ಯೆಗೈದ ವಿಕೃತ ಅಪರಾಧಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯ ಮರಣದಂಡನೆಯನ್ನು ವಿಧಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದ ನ್ಯಾಯಮೂರ್ತಿ ಜ್ಯೋತಿ ಸ್ವರೂಪ್ ಶ್ರೀವಾತ್ಸವ ಅಪರಾಧಿ ಮನೀಶ್ ಮಂಡಲ್ ಅಲಿಯಾಸ್ ನೇಪಾಲಿ ಮಂಡಲ್ಗೆ ಮರಣ ದಂಡನೆ ಶಿಕ್ಷೆ ವಿಧಿಸಿ, ರೂಪಾಯಿ 5000 ದಂಡವನ್ನು ಹೇರಿದೆ.
ಮನೀಶ್ ಮಂಡಲ್, ಅಮಿತ್ ಜಾ ಮತ್ತು ಮನೋಜ್ ಕುಮಾರ್ ಎಂಬ ಮೂವರು ದುಷ್ಕರ್ಮಿಗಳು ಮುಂಗರ್ ಜಿಲ್ಲೆಯ ಜಮಲ್ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕೇಶೋಪುರ್ನಿಂದ 10 ವರ್ಷದ ಬಾಲಕನನ್ನು ಅಪಹರಿಸಿ ಆತನ ಪೋಷಕರಿಂದ ಹಣದ ಬೇಡಿಕೆಯನ್ನಿಟ್ಟಿದ್ದರು. ಆದರೆ ಕೇಳಿದ್ದಷ್ಟು ಹಣ ಕೈಗೆ ಬರದಿದ್ದಾಗ ಮಗುವಿನ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ನಡೆಸಿ ಕೊಂದು ಹಾಕಿದ್ದರು. 2012ರಲ್ಲಿ ಈ ಘಟನೆ ನಡೆದಿತ್ತು.
ತನಿಖೆ ನಡೆಸಿದ ಪೊಲೀಸರಿಗೆ ಮನೀಶ್ ಮಂಡಲ್ ಒಬ್ಬನೇ ಸಿಕ್ಕಿಬಿದ್ದಿದ್ದ. ಇನ್ನಿಬ್ಬರು ಆರೋಪಿಗಳಾದ ಅಮಿತ್ ಜಾ ಮತ್ತು ಮನೋಜ್ ಕುಮಾರ್ ಇನ್ನುವರೆಗೂ ಪತ್ತೆಯಾಗಿಲ್ಲ.