ಕಾಶ್ಮೀರದ ಉರಿಯಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ ಸೈನಿಕ ಎಸ್.ಕೆ. ವಿದ್ಯಾರ್ಥಿ ಅವರ ಮೂವರು ಮಕ್ಕಳು ತಂದೆಯನ್ನು ಕಳೆದುಕೊಂಡ ನೋವಿನಲ್ಲೂ ಪರೀಕ್ಷೆ ಬರೆದು ಅಗಲಿದ ತಂದೆಗೆ ನೀಡಿದ್ದ ಮಾತನ್ನು ಪಾಲಿಸಿದ್ದಾರೆ.
ತಾವು ಓದಿನ ಕಡೆ ಸದಾ ಗಮನ ನೀಡುತ್ತೇವೆ ಎಂದು ಅವರು ತಂದೆಗೆ ವಾಗ್ದಾನ ಮಾಡಿದ್ದು, ಅದರಂತೆಯೇ ನಡೆದುಕೊಂಡಿದ್ದಾರೆ.
ಭಾನುವಾರ ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ನಡೆದ ಫಗ್ರರ ದಾಳಿಯಲ್ಲಿ ಹುತಾತ್ಮರಾದ 18 ಸೈನಿಕರಲ್ಲಿ ಬಿಹಾರದ ಗಯಾ ಜಿಲ್ಲೆಯ ಕುಂಕನಾರಿ ಗ್ರಾಮದ ಯೋಧ ಎಸ್.ಕೆ ವಿದ್ಯಾರ್ಥಿ ಕೂಡ ಸೇರಿದ್ದಾರೆ. 1999ರಲ್ಲಿ ಸೈನ್ಯ ಸೇರಿದ್ದ ವಿದ್ಯಾರ್ಥಿಗೆ ಆರ್ತಿ, ಅಂಶು, ಅನ್ಶಿಕಾ ಮತ್ತು ಆರ್ಯನ್ ಎಂಬ ನಾಲ್ಕು ಮಕ್ಕಳಿದ್ದಾರೆ. ಆರ್ತಿ 8ನೇ ತರಗತಿಯಲ್ಲಿ ಓದುತ್ತಿದ್ದರೆ, ಅಂಶು ಹಾಗೂ ಅಂಶಿಕಾ 2ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಆರ್ಯನ್ಗಿನ್ನು 2 ವರ್ಷ.
ತಮ್ಮ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯಬೇಕೆಂಬುದು ವಿದ್ಯಾರ್ಥಿ ಕನಸಾಗಿತ್ತು. ಹೀಗಾಗಿ ತಂದೆ ಗತಿಸಿದ್ದರೂ ಮಕ್ಕಳು ಅವರ ಕನಸಿಗೆ ತೊಡಕಾಗಬಾರದೆಂದು ಪರೀಕ್ಷೆಯನ್ನು ಬರೆದಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಪರೀಕ್ಷೆ ಬರೆಯುವಾಗ ಸಹ ಮಕ್ಕಳು ಅಳುತ್ತಲೇ ಇದ್ದರು ಎಂದು ಶಾಲೆಯ ಪ್ರಾಚಾರ್ಯ ಎ.ಕೆ.ಜನಾ ಹೇಳಿದ್ದಾರೆ .
ಕಳೆದ ಆಗಸ್ಟ್ ತಿಂಗಳಲ್ಲಿ ಅಪ್ಪ ಮನೆಗೆ ಬಂದಾಗ ಚೆನ್ನಾಗಿ ಓದ ನನ್ನ ಕನಸನ್ನು ನನಸು ಮಾಡಿ ಎಂದು ಹೇಳಿದ್ದರು ಎಂದು ಕಣ್ಣೀರಾಗುತ್ತಾಳೆ ಯೋಧನ ಹಿರಿಯ ಮಗಳು ಆರ್ತಿ.
ಅವಕಾಶ ಸಿಕ್ಕಿದರೆ ತಾನು ಅಪ್ಪನಂತೆ ಸೈನ್ಯ ಸೇರುತ್ತೇನೆ. ನಾವು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲೇಬೇಕು. ನನ್ನ ತಂದೆಯ ಬಗ್ಗೆ ಹೆಮ್ಮೆ ಪಡುತ್ತೇನೆ. ಅವರು ಸಾಯಲಿಲ್ಲ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ನಾನು ದೆಹಲಿಯ ಐಐಟಿಗೆ ಸೇರಬೇಕೆಂದು ಬಯಸಿದ್ದೆ. ಈಗ ಅದು ಸಾಧ್ಯವಾಗುತ್ತದೆಯೋ ಇಲ್ಲ ಎಂಬುದು ಭವಿಷ್ಯಕ್ಕೆ ಬಿಟ್ಟಿದ್ದು. ಅವಕಾಶ ಸಿಕ್ಕಿದರೆ ನಾನು ಸೈನ್ಯ ಸೇರುತ್ತೇನೆ ಎನ್ನುತ್ತಾಳೆ ಅವಳು.
ಮಗನ ಸಾವಿನಿಂದ ಆಘಾತಗೊಂಡಿರುವ ವಿದ್ಯಾರ್ಥಿ ತಂದೆ ಮಥುರಾ ಯಾದವ್ , ನನಗೆ ವಯಸ್ಸಾಗಿದೆ. ಆದರೂ ಗಡಿಯಲ್ಲಿ ಹೋರಾಡಲು ನಾನು ಸಿದ್ಧ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲೇ ಬೇಕು. ಪ್ರತೀಕಾರ ತೀರಿಸಿಕೊಳ್ಳದಿದ್ದರೆ ನಾನು ನನ್ನ ಉಳಿದ ಮಕ್ಕಳನ್ನು ಸೈನ್ಯಕ್ಕೆ ಸೇರಿಸಲಾರೆ ಎಂದು ಸೋಮವಾರ ಸರ್ಕಾರಕ್ಕೆ ಸೇಡು ತೀರಿಸಿಕೊಳ್ಳಿ ಎಂದು ಆಗ್ರಹಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ .