ಉಂಡ ಮನೆಗೆ ಕನ್ನ ಹಾಕಿದ ದುರುಳ!
ಬೆಂಗಳೂರು , ಬುಧವಾರ, 21 ಸೆಪ್ಟಂಬರ್ 2016 (11:37 IST)
ವೈದ್ಯೆಯೊಬ್ಬಳನ್ನು ಕಟ್ಟಿ ಹಾಕಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿಕೊಂಡು ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆಘಾತಕಾರಿ ಸಂಗತಿ ಎಂದರೆ ಅದೇ ಮನೆಯಲ್ಲಿ ಅಡುಗೆ ಮನೆ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೇ ಈ ಕೃತ್ಯ ನಡೆಸಿದ್ದು, ಆತನ ಗೆಳೆಯ ಇದಕ್ಕೆ ಸಾಥ್ ನೀಡಿದ್ದಾನೆ.
ಜಯನಗರದ 8 ನೇ ಬ್ಲಾಕ್ನ ಪವನ್ ಜೈನ್ ಎಂಬುವವರ ನಿವಾಸದಲ್ಲಿ ಉಂಡ ಮನೆಗೆ ಕನ್ನ ಹಾಕಿದಂತಹ ಈ ಘಟನೆ ನಡೆದಿದೆ. ಮನೆ ಮಾಲೀಕ ಪವನ್ ಜೈನ್ ಹಾಗೂ ಅವರ ಪತ್ನಿ ಅಮೆರಿಕಾ ಪ್ರವಾಸಕ್ಕೆ ತೆರಳಿದ್ದು ವೃತ್ತಿಯಲ್ಲಿ ವೈದ್ಯೆಯಾಗಿರುವ ಅವರ ಪುತ್ರಿ ಪ್ರತಿಭಾ ಜೈನ್ ಮಾತ್ರ ಮನೆಯಲ್ಲಿದ್ದರು. ಜಾರ್ಖಂಡ್ ಮೂಲದ ದಿನೇಶ್ ಎಂಬಾತ ಇವರ ಮನೆಯಲ್ಲಿ ಕಳೆದ ಮೂರು ವರ್ಷದಿಂದ ಅಡುಗೆ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈತನನ್ನು ಅಪಾರವಾಗಿದ್ದ ನಂಬಿದ್ದ ಜೈನ್ ದಂಪತಿ ತಮ್ಮ ಮಗಳು ಪ್ರತಿಭಾಳನ್ನು ಬಿಟ್ಟು ವಿದೇಶಕ್ಕೆ ಪ್ರವಾಸಕ್ಕೆ ಹೋಗಿದ್ದರು. ಆದರೆ ಮಾಲೀಕರು ತನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನು ದಿನೇಶ್ ಉಳಿಸಿಕೊಳ್ಳಲಿಲ್ಲ.
ಸೋಮವಾರ ರಾತ್ರಿ ತನ್ನ ಸ್ನೇಹಿತನನ್ನು ಅಲ್ಲಿಗೆ ಕರೆಸಿಕೊಂಡಿದ್ದಾನೆ ದಿನೇಶ್. ಬಳಿಕ ಇಬ್ಬರು ಸೇರಿ ಪ್ರತಿಭಾಗೆ ಚಾಕು ತೋರಿಸಿ, ಕೈ ಕಾಲು ಕಟ್ಟಿ ಬಾಯಿಗೆ ಪ್ಲಾಸ್ಟರ್ ಹಾಕಿದ್ದಾರೆ. ನಂತರ ಇಬ್ಬರು ಸೇರಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳ್ಳತನ ಪ್ರಕರಣ ದಾಖಲಿಸಿಕೊಂಡಿರುವ ಜಯನಗರ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ .
ಮುಂದಿನ ಸುದ್ದಿ