ದೇಶಾದ್ಯಂತ ಅಸಹಿಷ್ಣುತೆ ವಿವಾದ ಹುಟ್ಟುಹಾಕಿದ್ದ ಉತ್ತರ ಪ್ರದೇಶದ ದಾದ್ರಿ ಹತ್ಯೆ ಪ್ರಕರಣ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ದಾರುಣವಾಗಿ ಹತ್ಯೆಗೀಡಾದ ಮೊಹಮ್ಮದ್ ಇಕ್ಲಾಖ್ ಮನೆಯ ಫ್ರಿಜ್ನಲ್ಲಿದುದು ಕುರಿ ಮಾಂಸ ಅಲ್ಲ, ದನ ಅಥವಾ ಕರುವಿನ ಮಾಂಸ ಎಂದು ತಿಳಿದು ಬಂದಿದೆ. ಮಥುರಾದ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಗುರುವಾರ ಇದನ್ನು ಖಚಿತಪಡಿಸಿದೆ ಎಂದು ರಾಷ್ಟ್ರೀಯ ಸುದ್ದಿಪತ್ರಿಕೆಯೊಂದು ವರದಿ ಮಾಡಿದೆ.
ಹತ್ಯೆಗೀಡಾದ ಇಕ್ಲಾಖ್ ಮನೆಯ ಫ್ರಿಜ್ನಿಂದ ಸಂಗ್ರಹಿಸಲಾಗಿದ್ದ ಮಾಂಸದ ಚೂರುಗಳ ರಾಸಾಯನಿಕ ವಿಶ್ಲೇಷಣೆ ಆಧಾರದ ಮೇಲೆ ವಿಧಿ ವಿಜ್ಞಾನ ಪ್ರಯೋಗಾಲಯ ಅದು ಗೋಮಾಂಸ ಎಂದು ವರದಿ ಮಾಡಿದೆ.
ಈ ವರದಿ ಸಮಾಜವಾದಿ ಪಕ್ಷದ ನೇತೃತ್ವದ ಉತ್ತರ ಪ್ರದೇಶ ಸರ್ಕಾರಕ್ಕೆ ದೊಡ್ಡ ಮಟ್ಟದಲ್ಲಿ ಇರಿಸು ಮುರಿಸು ಉಂಟುಮಾಡುವ ಸಾಧ್ಯತೆಗಳು ದಟ್ಟವಾಗಿದ್ದು, ಮತ್ತೆ ರಾಜಕೀಯ ಕೋಲಾಹಲವನ್ನು ಹುಟ್ಟು ಹಾಕಬಹುದು. ಯುಪಿ ಸರ್ಕಾರದ ಮುಖ್ಯ ಪಶು ಅಧಿಕಾರಿಗಳು ನೀಡಿದ್ದ ವರದಿ ಅದು ಗೋಮಾಂಸವಲ್ಲ ಕುರಿ ಮಾಂಸ ಎಂದು ವರದಿ ನೀಡಿತ್ತು.
ಗೋ ಹತ್ಯೆ ಮಾಡಿದ್ದಾರೆ, ಮನೆಯಲ್ಲಿ ಗೋಮಾಂಸ ಸಂಗ್ರಹಿಸಿಟ್ಟಿದ್ದಾರೆ ಎಂಬ ಕಾರಣಕ್ಕೆ ಮೇಲೆ ಗ್ರೇಟರ್ ನೋಯ್ಡಾದ ದಾದ್ರಿಯ ಬಿಸಾದ ಗ್ರಾಮದ ನಿವಾಸಿ ಮೊಹಮ್ಮದ್ ಇಕ್ಲಾಖ್ (52) ಮತ್ತು ಅವರ ಮಗ ದನೀಷ್ (22) ಮೇಲೆ ಅನ್ಯ ಸಮುದಾಯದ ಗುಂಪೊಂದು ಹಲ್ಲೆ ನಡೆಸಿತ್ತು. ಘಟನೆಯಲ್ಲಿ ಇಕ್ಲಾಖ್ ಸಾವನ್ನಪ್ಪಿದ್ದರೆ, ಮಗ ಗಂಭೀರವಾಗಿ ಗಾಯಗೊಂಡಿದ್ದ.
ಈ ಪ್ರಕರಣ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೇರಿದ ಬಳಿಕ ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬ ಚರ್ಚೆಯನ್ನು ಹುಟ್ಟು ಹಾಕಿತ್ತು. ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಘಟನೆಯ ರಾಜಕೀಯ ಲಾಭ ಪಡೆದುಕೊಳ್ಳಲು ಪ್ರಯತ್ನಿಸಿದ್ದವು. ಘಟನೆಯನ್ನು ವಿರೋಧಿಸಿ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಆರೋಪಿಸಿ ಹಲವು ಸಾಹಿತಿಗಳು, ವಿಜ್ಞಾನಿಗಳು ತಮ್ಮ ಪ್ರಶಸ್ತಿ ವಾಪಸ್ಸಾತಿ ಮಾಡುವ ಮೂಲಕ ಪ್ರತಿಭಟಿಸಿದ್ದರು.
ಎಐಎಮ್ಐಎಮ್ ವರಿಷ್ಠ ಅಸಾದುದ್ದೀನ್ ಓವೈಸಿ, ದೆಹಲಿ ಮುಖ್ಯಮಂತ್ರಿ, ಆಪ್ ನಾಯಕ ಕೇಜ್ರಿವಾಲ್ , ಕೇಂದ್ರ ಸಚಿವ ಮಹೇಶ್ ಶರ್ಮಾ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಪೀಡಿತನ ಮನೆಗೆ ಭೇಟಿ ನೀಡಿದ್ದರು. ಇಕ್ಲಾಖ್ ಕುಟುಂಬಕ್ಕೆ ಅಖಿಲೇಶ್ ಸರ್ಕಾರ 45 ಲಕ್ಷ ರೂಪಾಯಿ ಪರಿಹಾರ ಘೋಷಿಸಿತ್ತು. ಜತೆಗೆ ನಾಲ್ಕು ನಿವೇಶನಗಳನ್ನು ನೀಡಿತ್ತು.
ಪೊಲೀಸರು ಇಕ್ಲಾಖ್ ಅವರ ಮನೆಯಲ್ಲಿ ದೊರೆತಿದ್ದ ಮಾಂಸದ ತುಂಡನ್ನು ಪರಿಶೀಲನೆಗಾಗಿ ಮಥುರಾದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು.
ಉತ್ತರ ಪ್ರದೇಶದಲ್ಲಿ ಹಲವು ವರ್ಷಗಳಿಂದ ಗೋ ಹತ್ಯೆಯನ್ನು ನಿಷೇಧಿಸಲಾಗಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ.