Publish Date: Wed, 04 May 2022 (14:28 IST)
Updated Date: Wed, 04 May 2022 (11:32 IST)
ಇತ್ತೀಚಿನ ದಿನಗಳಲ್ಲಿ ನಟ ಯಶ್ ಅವರು ರಾಜಕೀಯಕ್ಕೆ ಬರುತ್ತಾರೆ ಎನ್ನುವ ಕುರಿತು ಭಾರೀ ಚರ್ಚೆ ಆಗುತ್ತಿದೆ.
ಅವರು ಈ ಕುರಿತು ಎಲ್ಲಿಯೂ ಹೇಳಿಕೆ ನೀಡದೇ ಇದ್ದರೂ, ಅವರ ನಡೆಗಳು ಇಂಥದ್ದೊಂದು ಪ್ರಶ್ನೆಯನ್ನು ಹುಟ್ಟು ಹಾಕುತ್ತಿವೆ. ಕಳೆದ ಐದಾರು ವರ್ಷಗಳಿಂದ ರಾಕಿಭಾಯ್ ಹತ್ತು ಹಲವು ಜನಪರ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದಾರೆ.
ಅದರಲ್ಲೂ ಉತ್ತರ ಕರ್ನಾಟಕದ ಅನೇಕ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಕೆರೆಗಳನ್ನು ಸಂರಕ್ಷಿಸಿದ್ದಾರೆ. ಹೀಗಾಗಿ ಅವರಿಗೆ ಜನಪರ ಕೆಲಸ ಮಾಡುವ ಒಲವು ಇದೆ.
ಅನೇಕ ಸಂದರ್ಶನಗಳಲ್ಲಿ ಯಶ್, ನನ್ನ ಗುರಿ ಬೇರೆ. ನಾನು ತಲುಪಬೇಕಿರುವ ಕೇಂದ್ರಸ್ಥಾನ ಬೇರೆ ಎನ್ನುವ ಅರ್ಥದಲ್ಲಿ ಅನೇಕ ಬಾರಿ ಮಾತಾಡಿದ್ದೂ ಇದೆ. ಹಾಗಾಗಿ ಯಶ್ ರಾಜಕೀಯಕ್ಕೆ ಬರುತ್ತಾರೆ ಎನ್ನುವ ಮಾತು ಮುನ್ನೆಲೆಗೆ ಬಂದಿದೆ.
ಅದಕ್ಕೆ ಪೂರಕ ಎನ್ನುವಂತೆ ಯಶ್ ನಿನ್ನೆಷ್ಟೇ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಭೇಟಿ ಮಾಡಿದ್ದಾರೆ. ಸದ್ಯ ಯಶ್ ಮತ್ತು ರಾಧಿಕಾ ಪಂಡಿತ್ ಗೋವಾದಲ್ಲೇ ಇದ್ದು, ಪಣಜಿಯಲ್ಲಿ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ.
ದಿಢೀರ್ ಅಂತ ಅವರು ರಾಜಕೀಯ ಪ್ರವೇಶ ಮಾಡದೇ ಇದ್ದರೂ, ಅದಕ್ಕೆ ಸೂಕ್ತ ವೇದಿಕೆಯನ್ನಂತೂ ಈಗಿನಿಂದಲೇ ತಯಾರು ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೂಡ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಯಶ್ ಮುಂದೊಂದು ದಿನ ದೊಡ್ಡ ರಾಜಕಾರಣಿಯಾಗಿ ಉನ್ನತ ಹುದ್ದೆಯನ್ನೂ ಏರಲಿ ಎನ್ನುವುದು ಅವರ ಅಭಿಮಾನಿಗಳ ಆಸೆಯೂ ಆಗಿದೆ.