Publish Date: Thu, 17 Aug 2023 (11:26 IST)
Updated Date: Thu, 17 Aug 2023 (10:37 IST)
ನವದೆಹಲಿ: ಪೂರ್ವ ಲಡಾಖ್ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಉಳಿದಿರುವ ಸಮಸ್ಯೆಗಳನ್ನು ವಿಳಂಬವಿಲ್ಲದೆ ಪರಿಹರಿಸಲು ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಮಂಗಳವಾರ ನಡೆದ 19ನೇ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಬಳಿಕ ಬುಧವಾರ ಸಚಿವಾಲಯ ತನ್ನ ಹೇಳಿಕೆ ಪ್ರಕಟಿಸಿದೆ. ಚುಶುಲ್-ಮೊಲ್ಡೊ ಗಡಿ ಸಭೆಯ ಸ್ಥಳದಲ್ಲಿ ಕಾರ್ಪ್ಸ್ ಕಮಾಂಡರ್ ಮಟ್ಟದ 19ನೇ ಸುತ್ತಿನ ಮಾತುಕತೆ ನಡೆಯಿತು.
ಎರಡು ದೇಶಗಳ ನಡುವಿನ ಸಮಸ್ಯೆ ಬಗ್ಗೆ ಧನಾತ್ಮಕ, ರಚನಾತ್ಮಕ ಮತ್ತು ಆಳವಾದ ಮಾತುಕತೆ ನಡೆಸಿದೆ. ಆದರೆ ಉಳಿದ ಘರ್ಷಣೆಯ ಬಿಂದುಗಳಲ್ಲಿ ಸೈನ್ಯವನ್ನು ಹಿಂಪಡೆಯುವ ತಕ್ಷಣದ ಪ್ರಗತಿಯನ್ನು ವರದಿ ಮಾಡಲಾಗಿಲ್ಲ ಎಂದು ವರದಿಯಲ್ಲಿ ತಿಳಿಸಿದೆ.
ಉಳಿದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಮಾತುಕತೆ ನಡೆಸಲು ಮತ್ತು ಈ ಮಾತುಕತೆ ವೇಗವನ್ನು ಕಾಪಾಡಿಕೊಳ್ಳಲು ಚೀನಾ ಒಪ್ಪಿಕೊಂಡಿದೆ. ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳಲು ಉಭಯ ಕಡೆಯಿಂದ ಒಪ್ಪಿಕೊಳ್ಳಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆ ತಿಳಿಸಿದೆ.