Publish Date: Fri, 19 Oct 2018 (08:30 IST)
Updated Date: Fri, 19 Oct 2018 (08:34 IST)
ನವದೆಹಲಿ: ದೇಶದಾದ್ಯಂತ ಸಂಚಲನ ಮೂಡಿಸಿರುವ ಲೈಂಗಿಕ ಶೋಷಣೆ ವಿರುದ್ಧದ ಮಿ ಟೂ ಅಭಿಯಾನದ ಬಗ್ಗೆ ಬಿಜೆಪಿ ಸಂಸದ, ಕೇಂದ್ರ ಸಚಿವ ರಾಧಾಕೃಷ್ಣನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇದು ವಿಕೃತ ಮನಸ್ಥಿತಿಯುಳ್ಳವರು ಆರಂಭಿಸಿದ ಅಭಿಯಾನ ಎಂದು ಸಚಿವ ರಾಧಾಕೃಷ್ಣನ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಹಿಂದೆಯೂ ಹಲವು ಬಾರಿ ಸಚಿವರು ವಿವಾದಾತ್ಮಕ ಹೇಳಿಕೆಗಳಿಂದ ಚರ್ಚೆಗೊಳಗಾಗಿದ್ದರು. ಮಹಿಳೆಯರ ಮೇಲೆ ಅತ್ಯಾಚಾರ ತಡೆಯಲು ಭಗವಾನ್ ಶ್ರೀರಾಮಚಂದ್ರ ಬಂದರೂ ಸಾಧ್ಯವಿಲ್ಲ ಎಂದು ಹಿಂದೊಮ್ಮೆ ಅವರು ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದೀಗ ಮಿ ಟೂ ಅಭಿಯಾನದಲ್ಲಿ ಮಹಿಳಾ ಪತ್ರಕರ್ತರು ಕೇಂದ್ರ ಸಚಿವ ಎಂ ಜೆ ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ಅವರ ರಾಜೀನಾಮೆಗೆ ಕಾರಣರಾದ ಬಳಿಕ ರಾಧಾಕೃಷ್ಣನ್ ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ.
‘ನಾನು ನೀವು ಎಲ್ಲರೂ ಮಹಿಳೆಯರೊಂದಿಗೆ ಕೆಲಸ ಮಾಡುತ್ತೇವೆ. ಒಂದು ವೇಳೆ ನಿಮ್ಮ ವಿರುದ್ಧ ನೀವು ಐದನೇ ಕ್ಲಾಸ್ ನಲ್ಲಿದ್ದಾಗ ಸಹಪಾಠಿ ಹುಡುಗಿ ಜತೆ ಆಡುವಾಗ ತಪ್ಪಾಗಿ ನಡೆದುಕೊಂಡಿದ್ದೀರಿ ಎಂದು ಆರೋಪಿಸಿದರೆ ಹೇಗಿರುತ್ತದೆ? ಇದನ್ನು ಒಪ್ಪಿಕೊಳ್ಳುವಿರಾ? ಇದು ನ್ಯಾಯವೇ?’ ಎಂದು ಸಚಿವರು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.