Publish Date: Fri, 19 Aug 2022 (14:22 IST)
Updated Date: Fri, 19 Aug 2022 (14:22 IST)
ನವದೆಹಲಿ : ಅಬಕಾರಿ ನೀತಿ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲೆ ಕೇಂದ್ರ ತನಿಖಾ ದಳ(ಸಿಬಿಐ) ದಾಳಿ ನಡೆಸಿದೆ.
ದೆಹಲಿಯ ಸುಮಾರು 20 ಸ್ಥಳಗಳಲ್ಲಿ ದಾಳಿಯಾಗಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ) ದೆಹಲಿಯ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಇತ್ತಿಚೆಗೆ ಎಫ್ಐಆರ್ ದಾಖಲಿಸಿತ್ತು. ಇದರ ಆಧಾರದ ಮೇಲೆ ಈ ದಾಳಿ ನಡೆಸಿ ತಪಾಸಣೆ ಆರಂಭಿಸಿದೆ.
ಈ ನಡುವೆ ಮನೀಶ್ ಸಿಸೋಡಿಯಾ ಅವರು ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ ಹಾಗೂ ತನಿಖೆಗೆ ಸಹಕರಿಸುವುದಾಗಿ ಹೇಳಿದ್ದಾರೆ. ದೇಶದ ಸೇವೆ ಮಾಡುವವರಿಗೆ ಈ ರೀತಿ ಕಿರುಕುಳ ನೀಡುತ್ತಿರುವುದು ದುರದೃಷ್ಟಕರ ಎಂದು ಸಿಸೋಡಿಯಾ ಹೇಳಿದ್ದಾರೆ.
ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಸಿಬಿಐ ನಡೆಯನ್ನು ನಾವು ಸ್ವಾಗತಿಸುತ್ತೇವೆ. ಈ ಹಿಂದೆಯೂ ಪಕ್ಷದ ಇತರ ನಾಯಕರ ಮೇಲೆ ದಾಳಿಗಳು ನಡೆದಿವೆ. ಆದರೆ ಅವುಗಳಿಂದ ಏನೂ ಹೊರಬಂದಿಲ್ಲ.
ದೆಹಲಿಯ ಆರೋಗ್ಯ ಮತ್ತು ಶಿಕ್ಷಣದ ಮಾದರಿಗಳನ್ನು ಜಗತ್ತು ಮೆಚ್ಚುತ್ತಿದೆ. ಇದನ್ನು ಸಹಿಸಲಾಗದೇ ಆರೋಗ್ಯ ಮತ್ತು ಶಿಕ್ಷಣ ಸಚಿವರ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಹೇಳಿದರು.