Publish Date: Thu, 12 Aug 2021 (13:32 IST)
Updated Date: Thu, 12 Aug 2021 (13:36 IST)
ನವದೆಹಲಿ(ಆ.12): ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ಟ್ವಿಟರ್ ಈಗ ಕಾಂಗ್ರೆಸ್ ಗುರಿಯಾಗಿದೆ. ಹೌದು ದೆಹಲಿಯಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಸಂತ್ರಸ್ತೆಯ ಕುಟುಂಬದ ಸದಸ್ಯರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕಾಗಿ ರಾಹುಲ್ ಗಾಂಧಿ ಖಾತೆಯನ್ನು ಟ್ವಿಟರ್ ಅಮಾನತುಗೊಳಿಸಿತ್ತು. ಇದರ ಬೆನ್ನಲ್ಲೇ ಈಗ ಇನ್ನೂ ಐವರು ಪ್ರಮುಖ ನಾಯಕರ ಖಾತೆಗಳನ್ನು ಅಮಾನತುಗೊಳಿಸಿದೆ.
ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ಸಿಗರು ಈ ಬಗ್ಗೆ ತಮ್ಮ ಕೋಪ ಹೊರಹಾಕಲಾರಂಭಿಸಿದ್ದಾರೆ. ಅಲ್ಲದೇ ಟ್ವಿಟರ್ನ್ನು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ಗೆ ಹೋಲಿಸಿದ್ದಾರೆ.
ಫೇಸ್ಬುಕ್ನಲ್ಲಿ ಬರೆದುಕೊಂಡ INC
'ನಮ್ಮ ನಾಯಕರನ್ನು ಜೈಲಿಗೆ ಹಾಕಿದಾಗ ನಾವು ಭಯಪಡಲಿಲ್ಲ, ಆಗಲೇ ನಾವು ಹೆದರಿಲ್ಲ ಎಂದರೆ ಈಗ ಟ್ವಿಟರ್ ಖಾತೆ ರದ್ದುಗೊಂಡಿರುವುದಕ್ಕೆ ಯಾಕೆ ಹೆದರಬೇಕು? ನಾವು ಕಾಂಗ್ರೆಸ್, ಇದು ಜನರ ಸಂದೇಶ, ನಾವು ಹೋರಾಡುತ್ತೇವೆ, ನಾವು ಹೋರಾಡುತ್ತಲೇ ಇರುತ್ತೇವೆ. ಅತ್ಯಾಚಾರಕ್ಕೊಳಗಾದ ಬಾಲಕಿಗೆ ನ್ಯಾಯ ದೊರಕಿಸಿಕೊಡಲು ಧ್ವನಿ ಎತ್ತುವುದು ಅಪರಾಧವಾಗಿದ್ದರೆ, ನಾವು ಈ ಅಪರಾಧವನ್ನು ನೂರು ಬಾರಿ ಮಾಡುತ್ತೇವೆ. ಜೈ ಹಿಂದ್, ಸತ್ಯಮೇವ ಜಯತೆ ಎಂದು ಬರೆದಿದ್ದಾರೆ.
ಕಾಂಗ್ರೆಸ್ ಪಕ್ಷದ ಖಾತೆಯೂ ಸ್ಥಗಿತಗೊಳಿಸಲಾಗಿದೆ
ಬುಧವಾರ ರಾತ್ರಿ ಸೋಶಿಯಲ್ ಮೀಡಿಯಾ ಮಾರ್ಗಸೂಚಿಗಳ ಉಲ್ಲಂಘನೆ ಆರೋಪದಡಿ ಕಾಂಗ್ರೆಸ್ ಪಕ್ಷದ ಅಧಿಕೃತ ಖಾತೆ (@INCIndia) ಸೇರಿದಂತೆ ಪಕ್ಷದ ಮಾಧ್ಯಮ ಮುಖ್ಯಸ್ಥ ರಣದೀಪ್ ಸುರ್ಜೆವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಅಜಯ್ ಮಾಕನ್, ಲೋಕಸಭೆಯಲ್ಲಿ ಪಕ್ಷದ ಸಚೇತಕ ಮಾಣಿಕ್ಕಂ ಟಾಗೋರ್, ಅಸ್ಸಾಂ ಉಸ್ತುವಾರಿ ಮತ್ತು ಮಾಜಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹಾಗೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶ್ಮಿತಾ ದೇವ್ ಅವರ ಟ್ವಿಟರ್ ಖಾತೆಗಳನ್ನು ನಿರ್ಬಂಧಿಸಲಾಗಿದೆ.
ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾದ ಟ್ವಿಟರ್
ಈ ಬೆಳವಣಿಗೆಯ ನಂತರ, ಟ್ವಿಟರ್, ಕಾಂಗ್ರೆಸ್ ನಾಯಕ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ತಮ್ಮ ಖಾತೆಯಿಂದ ಪೋಸ್ಟ್ ಒಣದನ್ನು ಶೇರ್ ಮಾಡಿರುವ ಭಾರತೀಯ ಯುವ ಕಾಂಗ್ರೆಸ್ (NYC) ಅಧ್ಯಕ್ಷ ಶ್ರೀನಿವಾಸ್ ಬಿವಿ ಮೊದಲು ರಾಹುಲ್ ಗಾಂಧಿ ಖಾತೆ, ನಂತರ ಕಾಂಗ್ರೆಸ್ ಕಾರ್ಯಕರ್ತರ ಖಾತೆ, ಬಳಿಕ ಕಾಂಗ್ರೆಸ್ ನಾಯಕರ ಖಾತೆ, ಈಗ @INCIndia ನ ಅಧಿಕೃತ ಖಾತೆ. ಈ ಮೂಲಕ Twitter ಬಹಿರಂಗವಾಗಿ ಬಿಜೆಪಿ ಪರ ಬ್ಯಾಟಿಂಗ್ ಮಾಡುತ್ತಿದೆ. ನಾವು ಇನ್ನೂ ಭಾರತದಲ್ಲಿದ್ದೇವಾ ಅಥವಾ ಉತ್ತರ ಕೊರಿಯಾದಲ್ಲಿ ವಾಸಿಸುತ್ತಿದ್ದೇವೆಯೇ? ಎಂದು ಪ್ರಶ್ನಿಸಿ, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ವಿಟರ್ ಮುಖ್ಯಸ್ಥ ಜಾಕ್ ಡಾರ್ಸೆ ಅವರೇ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ.