ಅಪಘಾತದಲ್ಲಿ ಸಾವನ್ನಪ್ಪಿದ ಹಿರಿಯ ಸಹೋದರ ಚಿತೆಯಲ್ಲಿ ಹಾರಿ ತಂಗಿಯೂ ಸಾವನ್ನಪ್ಪಿದ ಘಟನೆ ರಾಜಸ್ಥಾನದ ದುಂಗರ್ಪುರ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಮೃತಳನ್ನು ದುರ್ಗಾ (28) ಎಂದು ಗುರುತಿಸಲಾಗಿದ್ದು ಆಕೆ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಳು ಎಂದು ತಿಳಿದು ಬಂದಿದೆ.
ವಿವಾಹಿತಳಾಗಿದ್ದ ಆಕೆಗೆ ಮೂವರು ಮಕ್ಕಳಿದ್ದು ಕಳೆದ ನಾಲ್ಕು ವರ್ಷಗಳಿಂದ ತಾಯಿ ಮತ್ತು ಮೂವರು ಸಹೋದರರ ಜತೆಗೆ ತವರಿನಲ್ಲಿಯೇ ವಾಸಿಸುತ್ತಿದ್ದಳು.ಆಕೆ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಕಾರಣಕ್ಕೆ ಪತಿ ಆಕೆಯನ್ನು ಹಿಂತಿರುಗಿ ಕರದೊಯ್ಯಲು ಒಪ್ಪಿರಲಿಲ್ಲ.
ಆಕೆಯ ಸಹೋದರರಲ್ಲಿ ಒಬ್ಬನಾದ ವೇಲಾ ರಾಮ್ ಮನತ್ (32) ದುಂಗರ್ಪುರ ನಗರದಿಂದ ತನ್ನ ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಅಪಘಾತದಲ್ಲಿ ಮೃತ ಪಟ್ಟಿದ್ದ. ಆದರೆ ಆತನ ಗುರುತು ಪತ್ತೆಯಾಗಿರಲಿಲ್ಲ. ಗುರುವಾರ ರಾತ್ರಿ ಈ ಘಟನೆ ನಡೆದಿತ್ತು.
ಶುಕ್ರವಾರ ಮುಂಜಾನೆ ಆತನ್ಯಾರು ಎಂಬುದು ತಿಳಿದು ಬಂದಿದ್ದು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಒಪ್ಪಿಸಲಾಗಿತ್ತು. ಅದೇ ದಿನ ಸಂಜೆ ಆತನ ಅಂತ್ಯಸಂಸ್ಕಾರವನ್ನು ಸಹ ನಡೆಸಲಾಯಿತು. ಶವವನ್ನು ಸುಟ್ಟ ಬಳಿಕ ಕುಟುಂಬಸ್ಥರು ಮನೆಗೆ ಮರಳಿದ್ದಾರೆ. ಸ್ವಲ್ಪ ಸಮಯದ ಬಳಿಕ ಆಕೆಯ ತಂಗಿ ದುರ್ಗಾ ಚಿತೆಯಲ್ಲಿ ಹಾರುತ್ತಿದ್ದುದನ್ನು ಅಲ್ಲೇ ಹತ್ತಿರದಲ್ಲಿದ್ದ ಮನೆಯ ಬಾಲಕನೋರ್ವ ನೋಡಿದ್ದಾನೆ. ತಕ್ಷಣ ಪೊಲೀಸರಿಗೂ ಮಾಹಿತಿ ನೀಡಲಾಯಿತು.
ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರು ವೈದ್ಯರನ್ನು ಕರೆಸಲಾಗಿ ಆಕೆ ಮೃತ ಪಟ್ಟಿರುವುದು ತಿಳಿದು ಬಂದಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.