ಮೂರು ವರ್ಷದ ಹಿಂದಿನ ಪ್ರಕರಣಕ್ಕೆ ಮರುಜೀವ ನೀಡುವ ಮೂಲಕ ದಕ್ಷ ಐಎಎಸ್ ಅಧಿಕಾರಿ ಅಶೋಕ್ ಖೇಮಾ ವಿರುದ್ಧ ಹರಿಯಾಣಾ ಸರ್ಕಾರ ಮತ್ತೆ ಆರೋಪ ಪಟ್ಟಿ ದಾಖಲು ಮಾಡಿದೆ.
ಹರ್ಯಾಣದ ಬೀಜ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾಗ(2012-2013) 87,000 ಕ್ವಿಂಟಾಲ್ ಗೋಧಿ ಸ್ಟಾಕ್ ಇಟ್ಟುಕೊಂಡು ಅಶೋಕ್ ಖೇಮ್ಕಾ 4 ಕೋಟಿ ನಷ್ಟ ಉಂಟು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಆದೇಶ ರದ್ದು ಪಡಿಸಿದ್ದ ಹಿನ್ನೆಲೆಯಲ್ಲಿ ಖೇಮ್ಕಾ ವಿರುದ್ಧ ಈ ಹಿಂದೆ ಹರಿಯಾಣಾದಲ್ಲಿದ್ದ ಕಾಂಗ್ರೆಸ್ ಸರ್ಕಾರ ವ್ಯಾಪ್ತಿ ಮೀರಿ ಅಧಿಕಾರ ಚಲಾಯಿಸಿದ ಆರೋಪ ಹೊರಿಸಿ ಚಾರ್ಜ್ಶೀಟ್ ದಾಖಲಿಸಿತ್ತು. ಕಳೆದ ನವೆಂಬರ್ ತಿಂಗಳಲ್ಲಿ ಬಿಜೆಪಿ ಸರ್ಕಾರ ಈ ಆರೋಪಪಟ್ಟಿಯನ್ನು ರದ್ದುಗೊಳಿಸಿತ್ತು. ವಿಚಿತ್ರವೆಂದರೆ ಅದೇ ಬಿಜೆಪಿ ಸರ್ಕಾರ ಅವರ ಮೇಲೀಗ ಆರೋಪ ಪಟ್ಟಿ ದಾಖಲಿಸಿದೆ.
ಪ್ರಸ್ತುತ ಖೇಮ್ಕಾ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದಕ್ಷತೆಗೆ ಹೆಸರುವಾಸಿಯಾಗಿರುವ ಖೇಮ್ಕಾ ತಮ್ಮ 24 ವರ್ಷಗಳ ಸೇವಾವಧಿಯಲ್ಲಿ 46ಕ್ಕಿಂತ ಹೆಚ್ಚು ಸಲ ವರ್ಗಾವಣೆಯಾಗಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.