ಮದ್ರಾಸ್ ಹೈಕೋರ್ಟ್ ಆವರಣದಲ್ಲಿ ಮಂಗಳವಾರ ಮಗನೇ ತನ್ನ ವಕೀಲ ತಂದೆಯ ಮೇಲೆ ಮಾರಣಾಂತಿಕ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿಗಳು ಹೊರ ಬಿದ್ದಿವೆ. ನನ್ನ ಜೀವ ರಕ್ಷಣೆಗಾಗಿ ನಾನು ತಂದೆಯ ಮೇಲೆ ಹಲ್ಲೆ ಮಾಡಿದೆ ಎಂದು ಹಾಡುಹಗಲೇ ದಾಳಿಗೊಳಗಾದ ಮಣಿಮಾರನ್ ಮಗ ರಾಜೇಶ್ ಹೇಳಿದ್ದಾನೆ.
ನನ್ನ ತಂದೆಗೆ ರೌಡಿಗಳ ಸಂಪರ್ಕವಿತ್ತು. ಅವರ ಸಹಾಯದಿಂದ ಆತ ನನ್ನನ್ನು ಸಾಯಿಸಬಹುದು ಎಂಬ ಭಯದಲ್ಲಿ ನನ್ನ ಪ್ರಾಣ ರಕ್ಷಣೆಗಾಗಿ ನಾನು ಸದಾ ಚಾಕುವನ್ನು ಇಟ್ಟುಕೊಳ್ಳುತ್ತಿದ್ದೆ ಎಂದು ರಾಜೇಶ್ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದಾನೆ.
ಬಿ.ಕಾಂ ಪದವೀಧರನಾಗಿರುವ ರಾಜೇಶ್ ತನ್ನ ತಂದೆ ಬಳಿಯೇ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ. ಮಣಿಮಾರನ್ ಮಹಿಳೆಯೊಂದಿಗೆ ಸಂಬಂಧವನ್ನು ಬೆಳೆಸಿಕೊಂಡು ಮನೆಗೆ ಬರುವುದನ್ನು ನಿಲ್ಲಿಸಿದಾಗ ತಂದೆ-ಮಗನಲ್ಲಿ ವೈಮನಸ್ಸು ಬೆಳೆಯುತ್ತ ಹೋಯಿತು. ತಂದೆಯ ಈ ಸಂಬಂಧ ತನ್ನ ಸಹೋದರಿಯ ಮದುವೆಗೆ ಮುಳುವಾಗಿದೆ ಎಂದು ರಾಜೇಶ್ ತಂದೆ ಜತೆ ಸದಾ ಜಗಳವಾಡುತ್ತಿದ್ದ.
ಮಂಗಳವಾರ, ವಕೀಲರ ಕೋಣೆಗೆ ನುಗ್ಗಿದ ರಾಜೇಶ್ ತಂದೆ ಜತೆ ಜಗಳವಾಡಿ ಬರ್ಬರವಾಗಿ ದಾಳಿ ಮಾಡಿದ್ದಾನೆ. ಅದರಿಂದ ಕೋಪಗೊಂಡ ವಕೀಲನ ಸಹೋದ್ಯೋಗಿಗಳು ಸಹ ರಾಜೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ತಲೆ ಮತ್ತು ಕಾಲಿಗೆ ಗಂಭೀರವಾಗಿ ಗಾಯಗೊಂಡಿದ್ದ ಮಣಿಮಾರನ್ನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ರಾಜೇಶ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾನೆ.
ತನ್ನ ಮಗನ ವಿರುದ್ಧ ಮಣಿಮಾರನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.