Publish Date: Sun, 18 Aug 2024 (17:17 IST)
Updated Date: Sun, 18 Aug 2024 (17:21 IST)
ಮಹಾರಾಷ್ಟ್ರ: ಛತ್ರಪತಿ ಸಂಭಾಜಿನಗರ ಜಿಲ್ಲೆಯ ಜಿಲ್ಲಾ ಕೌನ್ಸಿಲ್ ಶಾಲೆಯ ಸುಮಾರು 80 ವಿದ್ಯಾರ್ಥಿಗಳು ಶನಿವಾರ ತಮ್ಮ ಶಾಲೆಯಲ್ಲಿ ನೀಡಿದ ಬಿಸ್ಕೆಟ್ ತಿಂದು ವಾಕರಿಕೆ ಮತ್ತು ವಾಂತಿ ಅನುಭವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
257 ವಿದ್ಯಾರ್ಥಿಗಳು ಬಿಸ್ಕೆಟ್ ಸೇವನೆ ಮಾಡಿದ್ದು, ಇದರಲ್ಲಿ 80 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಜಿಲ್ಲಾ ಕೌನ್ಸಿಲ್ ಶಾಲೆಯ ಸುಮಾರು 80 ವಿದ್ಯಾರ್ಥಿಗಳು ಪೌಷ್ಠಿಕ ಆಹಾರ ಕಾರ್ಯಕ್ರಮದ ಭಾಗವಾಗಿ ನೀಡಲಾದ ಬಿಸ್ಕೆಟ್ಗಳನ್ನು ಸೇವಿಸಿದ ನಂತರ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಕೇಟ್ ಜಲಗಾಂವ್ ಗ್ರಾಮದ ಶಾಲೆಯಲ್ಲಿ ಶನಿವಾರ ಬೆಳಿಗ್ಗೆ 8:30 ರ ಸುಮಾರಿಗೆ ಬಿಸ್ಕೆಟ್ ಸೇವಿಸಿದ ನಂತರ ಮಕ್ಕಳಿಗೆ ವಾಕರಿಕೆ ಮತ್ತು ವಾಂತಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವಿಷಯ ತಿಳಿದ ಗ್ರಾಮದ ಮುಖಂಡರು ಹಾಗೂ ಅಧಿಕಾರಿಗಳು ಕೂಡಲೇ ಶಾಲೆಗೆ ಆಗಮಿಸಿ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರು.
ವಿದ್ಯಾರ್ಥಿಗಳನ್ನು ಗ್ರಾಮಾಂತರ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವಿವರಿಸಲಾಗಿದೆ.
ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಬಾಬಾಸಾಹೇಬ್ ಘುಘೆ ಮಾತನಾಡಿ, ಶನಿವಾರ ಬೆಳಗ್ಗೆ 8.30ರ ಸುಮಾರಿಗೆ ಬಿಸ್ಕೆಟ್ ಸೇವಿಸಿದ 257 ವಿದ್ಯಾರ್ಥಿಗಳ ಆರೋಗ್ಯದಲ್ಲಿ ವ್ಯತ್ಯಯವಾಗಿದೆ. ಆಹಾರ ವಿಷದ ಲಕ್ಷಣಗಳನ್ನು ವರದಿ ಮಾಡಿದ್ದಾರೆ. ಅವರಲ್ಲಿ 153 ಮಂದಿಯನ್ನು ಆಸ್ಪತ್ರೆಗೆ ಕರೆತರಲಾಗಿದ್ದು, ಕೆಲವರಿಗೆ ಚಿಕಿತ್ಸೆ ನೀಡಲಾಗಿದೆ. ಮತ್ತು ಮನೆಗೆ ಕಳುಹಿಸಲಾಗಿದೆ.