Publish Date: Sat, 09 Oct 2021 (13:55 IST)
Updated Date: Sat, 09 Oct 2021 (13:52 IST)
ನವದೆಹಲಿ : ರಾಜ್ಯದ ಮುಖ್ಯಮಂತ್ರಿಯಾಗಿ ನನ್ನ ಅವಧಿ ಪೂರೈಸಲಿದದ್ದೇನೆ, ಹಾಗೂ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಮಾರ್ಗದರ್ಶನದಲ್ಲಿ 2023ರ ವಿಧಾನಸಭೆ ಚುನಾವಣೆ ನನ್ನ ನೇತೃತ್ವದಲ್ಲೇ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ನಡೆದ ಇಂಡಿಯಾ ಕಾನ್ ಕ್ಲೇವ್ ನಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, ಉತ್ತಮ ಆಡಳಿತ ನೀಡುವ ಜತೆಗೆ ಮತ್ತೊಂದು ಅವಧಿಗೆ ಬಿಜೆಪಿಯನ್ನು ಅಧಿಕಾರಕ್ಕ ತರುತ್ತೇನೆ .ಎಷ್ಟು ಅವಧಿಗೆ ನಾನು ಮುಖ್ಯಮಂತ್ರಿಯಾಗಿರುತ್ತೇನೆ ಎಂಬುದು ಮುಖ್ಯವಲ್ಲ. ಈ ಅವಧಿಯಲ್ಲಿ ಏನು ಮಾಡುತ್ತೇನೆ ಎಂಬುದು ಮುಖ್ಯ. ಹಾಗಾಗಿ ನನಗೆ ದೊರಕಿರುವ ಈ ಅವಧಿಯಲ್ಲಿ ಉತ್ತಮ ಆಡಳಿತ ನೀಡಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ," ಎಂದು ಹೇಳಿದರು.
''ಬಿಜೆಪಿ ಈಗ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಸಮಾಜದ ಎಲ್ಲ ವರ್ಗದವರನ್ನೂ ತಲುಪಿ ಅವರ ಬೆಂಬಲ ಪಡೆದ ಪಕ್ಷವಾಗಿದೆ. ಉತ್ತರ ಕರ್ನಾಟಕದಿಂದ ಲಿಂಗಾಯತ ಸಮುದಾಯದ ಹಲವು ಮಂದಿ ಬಿಜೆಪಿ ಶಾಸಕರು, ಸಂಸದರಾಗಿದ್ದಾರೆ. ಆದರೆ ಒಂದು ಪಕ್ಷ ಅಧಿಕಾರಕ್ಕೆ ಬರಬೇಕೆಂದರೆ ಪರಿಶಿಷ್ಟ ಜಾತಿ, ಪಂಗಡ, ಒಕ್ಕಲಿಗ, ಹಿಂದುಳಿದ ವರ್ಗದವರ ಬೆಂಬಲ ಬೇಕು. ಈ ವರ್ಗದವರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಹಾಗಾಗಿ ಬಿಜೆಪಿ ಈಗ ಕರ್ನಾಟಕದಲ್ಲಿ ಸಮಾಜದ ಎಲ್ಲ ವರ್ಗದವರ ಪಕ್ಷವಾಗಿದೆ,'' ಎಂದು ತಿಳಿಸಿದರು.