Publish Date: Thu, 27 Jul 2017 (11:21 IST)
Updated Date: Thu, 27 Jul 2017 (11:25 IST)
ಬೆಂಗಳೂರು: ಸೆಲ್ಫಿ ಕ್ರೇಜ್ ಜನರನ್ನು ಏನಲ್ಲ ಅಪಾಯಕ್ಕೆ ದೂಡುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಗಜರಾಜನೊದಿಗೆ ಸೆಲ್ಪಿ ತೆಗೆದುಕೊಳ್ಳಲು ಹೋಗಿ ಆನೆ ತಿವಿದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ.
ಬಿಎಂಟಿಸಿ ಕಂಡೆಕ್ಟರ್ ವೊಬ್ಬರ ಪುತ್ರ ಅಭಿಲಾಷ್ ವಿ ಮೃತ ವ್ಯಕ್ತಿ ಎಂದು ತಿಳಿದುಬಂದಿದೆ. ಉದ್ಯಾನವನದಲ್ಲಿ ಅಭಿಲಾಷ್ ತನ್ನ ಸ್ನೇಹಿತರೊಂದಿಗೆ ಆನೆ ಪಕ್ಕದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ ಸುಂದರ್ ಎಂಬ ಆನೆ ಉದ್ರೇಕಗೊಂಡಿದೆ. ರೊಚ್ಚಿಗೆದ್ದ ಆನೆ ಅಭಿಲಾಷ್ ನನ್ನು ತಿವಿದು ಬಿಟ್ಟಿದೆ. ಆತನ ಸ್ನೇಹಿತರು ಅಪಾಯದಿಂದ ಪಾರಾಗಿದ್ದಾರೆ.
ಅಭಿಲಾಷ್ ಗೆ ಆನೆಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಅಭ್ಯಾಸ. ಈ ಹಿಂದೆ ಕೂಡ ಮದಗಜಗಳಾದ ರೌಡಿ ರಂಗ ಮತ್ತು ಐರಾವತನನ್ನು ಪಳಗಿಸಲು ಕ್ರಾಲ್ ನಲ್ಲಿ ಇಟ್ಟಿದ್ದಾಗಲೂ ಬಂದು ಸೆಲ್ಫಿ ತೆಗೆದುಕೊಂಡು ಹೋಗಿದ್ದರಂತೆ. ಆದರೆ ಈ ಬಾರಿ ರಜೆಯ ದಿನ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಬಂದು ಸಫಾರಿಯಲ್ಲಿದ್ದ ಸುಂದರ ಎಂಬ ಆನೆ ಬಳಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಆನೆ ದಾಳಿ ಮಾಡಿದೆ. ಈ ವೇಳೆ ತಪ್ಪಿಸಿಕೊಳ್ಳಲಾಗದೇ ಅಭಿಲಾಷ್ ಸ್ಥಳದಲ್ಲೆ ಮೃತಪಟ್ಟಿದ್ದಾರೆ.