Publish Date: Fri, 02 Dec 2022 (18:47 IST)
Updated Date: Fri, 02 Dec 2022 (18:57 IST)
ಒಂದೇ ತಿಂಗಳ ಅಂತರದಲ್ಲಿ ಒಂದೇ ತಾಲೂಕಿನಲ್ಲಿ ಚಿರತೆ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಹೌದು, ಚಿರತೆ ಉಪಟಳದಿಂದ
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಜನ ಭಯಭೀತಿಗೊಂಡಿದ್ದಾರೆ. ಗುರುವಾರ ರಾತ್ರಿ ಮನೆ ಮುಂದೆ ಕುಳಿತಿದ್ದ ಯುವತಿ ಮೇಲೆ ದಾಳಿ ಮಾಡಿದ ಚಿರತೆ ಆಕೆಯನ್ನು ಕೊಂದು ಬಿಸಾಕಿದೆ. ತಿಂಗಳ ಹಿಂದೆಯಷ್ಟೇ ಚಿರತೆ ದಾಳಿಯಿಂದ ಟಿ.ನರಸೀಪುರ ತಾಲೂಕಿನ ಎಂ.ಎಲ್.ಹುಂಡಿಯ ಯುವಕನೊಬ್ಬ ಬಲಿಯಾದ. ಅದರ ಕರಾಳ ನೆನಪು ಮಾಸುವ ಮುನ್ನವೇ ಚಿರತೆ ಮತ್ತೊಂದು ಬಲಿಯನ್ನು ಪಡೆದಿದೆ. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದ ಮೇಘನಾ (22) ಎಂಬ ಯುವತಿಯು ಚಿರತೆ ದಾಳಿಗೆ ತುತ್ತಾಗಿದ್ದು, ಹಿತ್ತಲಿಗೆ ಹೋಗಿದ್ದ ಸಮಯದಲ್ಲಿ ಚಿರತೆ ದಾಳಿ ನಡೆಸಿದೆ. ಯುವತಿ ಮೇಲೆ ದಾಳಿ ಮಾಡಿದ ಚಿರತೆ ಆಕೆಯ ಕುತ್ತಿಗೆ ಹಾಗೂ ಮುಖದ ಭಾಗಕ್ಕೆ ತೀರ್ವ ಗಾಯಗೊಳಿಸಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಯುವತಿಯನ್ನು ಟಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿದ್ದಾಳೆ. ಚಿರತೆ ಹಿಡಿಯುವಂತೆ ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದರೂ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಈಗ ಮತ್ತೊಂದು ಬಡ ಜೀವ ಜೀವ ಕಳೆದುಕೊಂಡಂತಾಗಿದೆ.