Publish Date: Tue, 04 Jul 2023 (16:11 IST)
Updated Date: Tue, 04 Jul 2023 (16:14 IST)
ಪ್ರೀತಿಸುವಂತೆ ಹಿಂದೆ ಬಿದ್ದು ಕಿರುಕುಳ ನೀಡುತ್ತಿದ್ದ ಯುವಕನಿಂದ ಬೇಸತ್ತ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯ ಗಣಗರಹುಂಡಿ ಗ್ರಾಮದಲ್ಲಿ ನಡೆದಿದೆ. ಯುವತಿ ಹರ್ಷಿತಾ (21) ಮೃತ ದುರ್ದೈವಿ. ಅದೇ ಗ್ರಾಮದಲ್ಲಿ ವಾಸವಿದ್ದ ಯುವಕ ಶಿವು ಕಿರುಕುಳಕ್ಕೆ ಬೇಸತ್ತು ಹರ್ಷಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹರ್ಷಿತಾ ಪೋಷಕರು ಆರೋಪಿಸಿದ್ದಾರೆ. ಪಿಯುಸಿ ಓದಿದ್ದ ಹರ್ಷಿತಾ ಕಂಪ್ಯೂಟರ್ ಕ್ಲಾಸ್ಗೆ ಸೇರಿಕೊಂಡಿದ್ದಳು. ಹರ್ಷಿತಾಳನ್ನು ಲವ್ ಮಾಡುತ್ತಿದ್ದ ಶಿವು ಹಿಂದೆ ಬಿದ್ದು ಪ್ರೀತಿಸುವಂತೆ ಪೀಡಿಸುತ್ತಿದ್ದ. ಶಿವು ಮನವಿಯನ್ನು ಹರ್ಷಿತಾ ತಿರಸ್ಕರಿಸುತ್ತಿದ್ದಳು. ಈ ಮಧ್ಯೆ ಮನೆಯವರು ಹರ್ಷಿತಾಗೆ ಮದುವೆ ನಿಶ್ಚಯ ಮಾಡಲು ನಿರ್ಧರಿಸಿದ್ದರು. ಈ ವಿಷಯ ತಿಳಿದ ಯುವಕ ತನ್ನನ್ನು ಮದುವೆಯಾಗುವಂತೆ ಇನ್ನಷ್ಟು ಕಿರುಕುಳ ನೀಡಲು ಪ್ರಾರಂಭಿಸಿದ್ದ. ಶಿವು ಕಿರುಕುಳಕ್ಕೆ ಬೇಸತ್ತ ಹರ್ಷಿತಾ ಹುಳುಗಳನ್ನ ಸ್ವಚ್ಛಗೊಳಿಸಲು ಇಟ್ಟಿದ್ದ ಮಾತ್ರೆಗಳನ್ನ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಹರ್ಷಿತಾಳನ್ನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಹರ್ಷಿತಾ ಮೃತಪಟ್ಟಿದ್ದಾಳೆ. ಮಗಳ ಸಾವಿಗೆ ಶಿವು ಕಾರಣ ಎಂದು ಹರ್ಷಿತಾ ತಂದೆ ವೇಣುಗೋಪಾಲ್ ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿ ಶಿವುಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.