ಮೈಸೂರು: ಸಿದ್ದರಾಮಯ್ಯ ಸರ್ಕಾರವು ಆರ್ಸಿಬಿ ಗೆಲುವಿನ ಗಾಂಭೀರ್ಯತೆ ಅರ್ಥ ಮಾಡಿಕೊಳ್ಳದೇ ಕರ್ನಾಟಕದ ಮರ್ಯಾದೆ ಹಾಳು ಮಾಡಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿರುವುದು ಹಳಿ ತಪ್ಪಿದ ಸರ್ಕಾರ. ಟ್ರ್ಯಾಕ್ ಇಲ್ಲದೆಯೇ ಓಡುತ್ತಿದೆ. ಅವರ ಒಳ ಒಪ್ಪಂದ ಹೇಗಿದೆಯೋ ಗೊತ್ತಿಲ್ಲ. ಜನರಲ್ಲಿ ನೋವು ತಂದಿದ್ದೀರಿ. ನಿಮ್ಮ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಿ ಎಂದು ಮೈಸೂರಿನಲ್ಲಿ ಹೇಳಿದರು.
ಬೆಂಗಳೂರು ಪೊಲೀಸ್ ಕಮಿಷನರ್ ಆಗಿದ್ದ ದಯಾನಂದ್ ದಕ್ಷ ಅಧಿಕಾರಿ. ಅಂತಹವರ ಅಮಾನತು ಸರಿಯಲ್ಲ. ನಿಮ್ಮ ಪಟಾಲಂ ಪಾಪಕ್ಕೆ ಅವರನ್ನು ಗುರಿ ಮಾಡಿರುವುದು ಮಹಾ ಅಪರಾಧ. ಪೊಲೀಸರು ನೈತಿಕತೆಯ ಮುಖವಾಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಬೆಲೆ ತೆತ್ತದಿದ್ದರೆ ಜನರೇ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಕೊಟ್ಟಷ್ಟು ಫ್ರೀ ಹ್ಯಾಂಡ್ ಇನ್ನೊಬ್ಬರಿಗೆ ಕೊಟ್ಟಿಲ್ಲ. ಅವರ ವಿವೇಕಕ್ಕೆ ಏನಾಗಿದೆಯೋ ಗೊತ್ತಿಲ್ಲ. ಅಧಿಕಾರಕ್ಕೆ ಜೋತು ಬೀಳದೇ ನೈತಿಕತೆಯಿಂದ ಹೊಣೆ ಹೊರಬೇಕು ಎಂದು ಒತ್ತಾಯಿಸಿದರು.