ಕೊಪ್ಪಳ: 18 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಕಪ್ ಗೆದ್ದಿದೆ. ಈ ಪ್ರಯುಕ್ತ ಕೊಪ್ಪಳ ತಾಲ್ಲೂಕಿನ ಬಂಡಿ ಹರ್ಲಾಪುರ ಗ್ರಾಮದ ಯುವಕರು ಕೂಡ ಇಡೀ ಗ್ರಾಮಕ್ಕೆ ಮಾಂಸದೂಟ ಹಾಕಿ ಸಂಭ್ರಮಿಸಿದ್ದಾರೆ.
ಆರ್ಸಿಬಿ ತಂಡವು ಐಪಿಎಲ್ ಫೈನಲ್ನಲ್ಲಿ ಪಂಜಾಬ್ ತಂಡವನ್ನು 6 ರನ್ಗಳಿಂದ ಬಗ್ಗು ಬಡಿದು ಮೊದಲ ಬಾರಿ ಚಾಂಪಿಯನ್ ಆಗಿದೆ. ಈ ಹಿನ್ನೆಲೆಯಲ್ಲಿ ಯುವಕರ ಸಂಭ್ರಮ ಮೇರೆ ಮೀರಿದೆ.
ಆರ್ಸಿಬಿ ತಂಡ ಐಪಿಎಲ್ ಟ್ರೋಫಿ ಗೆದ್ದ ಮರುದಿನ ಬೆಂಗಳೂರಿನಲ್ಲಿ ಕಾಲ್ತುಳಿತವಾಗಿ 11 ಮಂದಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಯನ್ನು ಯುವಕರು ಮುಂದೂಡಿದ್ದರು. ಇದೀಗ, ಸಂಭ್ರಮವನ್ನು ಆಚರಿಸಿದ್ದಾರೆ.
ಈ ಬಾರಿ ಆರ್ಸಿಬಿ ಪ್ರಶಸ್ತಿ ಗೆದ್ದರೆ ಊರಿಗೆ ಮಾಂಸದೂಟ ಹಾಕಿಸುವುದಾಗಿ ಯುವಕರ ತಂಡ ಪ್ರತಿಜ್ಞೆ ಮಾಡಿತ್ತು. ಇದರಂತೆ ಆರ್ಸಿಬಿ ತಂಡವು ಅಭಿಮಾನಿಗಳ ಕನಸನ್ನು ನನಸು ಮಾಡಿದ ಹಿನ್ನೆಲೆ ಯುವಕರು ಇಡೀ ಗ್ರಾಮಕ್ಕೆ ಮಾಂಸದೂಟ ಹಾಕಿದ್ದಾರೆ. ಸಸ್ಯಾಹಾರಿ ಊಟಕ್ಕೂ ವ್ಯವಸ್ಥೆ ಮಾಡಲಾಗಿತ್ತು.
ಸಾಂಪ್ರದಾಯಿಕ ಶೈಲಿಯಲ್ಲಿ ಡಂಗುರ (ಸಾರ್ವಜನಿಕ ಘೋಷಣೆಗಳಿಗೆ ಬಳಸುವ ಡ್ರಮ್) ಬಾರಿಸುವ ಮೂಲಕ ಮತ್ತು ಬೀದಿಗಳಲ್ಲಿ ದೊಡ್ಡ ಗಂಟೆ ಬಾರಿಸುವ ಮೂಲಕ ಹಬ್ಬವನ್ನು ಘೋಷಿಸಲಾಯಿತು. ಎಲ್ಲರನ್ನೂ ಹಬ್ಬಕ್ಕೆ ಆಹ್ವಾನಿಸಲಾಯಿತು. ಈ ಹಬ್ಬಕ್ಕೆ ಸಂಪೂರ್ಣ ಗ್ರಾಮಸ್ಥರೇ ಹಣಕಾಸು ಒದಗಿಸಿದ್ದಾರೆನ್ನಲಾಗಿದೆ. ಬಂಡಿ ಹರ್ಲಾಪುರದಲ್ಲಿ ಸುಮಾರು 7,000 ಜನಸಂಖ್ಯೆ ಇದ್ದು, ಸುಮಾರು 3,000 ಜನರು ಸಂಭ್ರಮದಲ್ಲಿ ಪಾಲ್ಗೊಂಡರು.