Publish Date: Fri, 31 Aug 2018 (14:35 IST)
Updated Date: Fri, 31 Aug 2018 (15:15 IST)
ಹೈದ್ರಾಬಾದ ಕರ್ನಾಟಕ ಪ್ರದೇಶದ ಸಮಗ್ರ ಇತಿಹಾಸ ರಚಿಸುವ ನಿಟ್ಟಿನಲ್ಲಿ ಶೀಘ್ರವೇ ಕಾರ್ಯಾಗಾರ ಏರ್ಪಡಿಸಿ ಪರಿಣಿತರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ ಇತಿಹಾಸ ರಚನೆಗೆ ಮುಂದುವರೆಯಬೇಕು ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ಹೇಳಿದರು.
ಕಲಬುರಗಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ, ಹೈದ್ರಾಬಾದ ಕರ್ನಾಟಕ ಪ್ರದೇಶದ ಇತಿಹಾಸ ರಚನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೈದ್ರಾಬಾದ ಕರ್ನಾಟಕದ ಇತಿಹಾಸದ ಮಾಹಿತಿ ಸಂಗ್ರಹಣೆ ಸುಲಭವಾದ ಕೆಲಸವಲ್ಲ. ಈ ಭಾಗದ ಎಲ್ಲ ವಿಷಯಗಳನ್ನು ಸಂಗ್ರಹಿಸುವುದು ಅವಶ್ಯಕವಾಗಿದೆ. ಕಲಬುರಗಿ ವಿಭಾಗದ ಎಲ್ಲ ಜಿಲ್ಲೆಯ ವಿದ್ವಾಂಸರನ್ನು ಕಾರ್ಯಾಗಾರಕ್ಕೆ ಆಹ್ವಾನಿಸಿ ಅವರಿಂದ ಸಮಗ್ರ ಚಿತ್ರಣ ಪಡೆಯಬೇಕು ಎಂದರು.
ಹೈದ್ರಾಬಾದ ಕರ್ನಾಟಕದ ಇತಿಹಾಸವು ಕನ್ನಡ, ಉರ್ದು, ಪರ್ಶಿಯನ್, ಮರಾಠಿ ಹಾಗೂ ಈ ಭಾಗದ ಇನ್ನಿತರೆ ಭಾಷೆಗಳಲ್ಲಿ ಸಂಗ್ರಹವಾಗಿದೆ. ಅವುಗಳನ್ನು ಸಂಗ್ರಹಿಸುವ ಮೂಲಕ ಹೈ.ಕ. ಭಾಗದ ಸಂಪೂರ್ಣ ಇತಿಹಾಸದ ಮಾಹಿತಿ ಸಂಗ್ರಹಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲಾಧಿಕಾರಿಗಳಿಗೆ ತಮ್ಮ ಜಿಲ್ಲೆಗೆ ಸಂಬಂಧಿಸಿದ ಇತಿಹಾಸದ ದಾಖಲೆಗಳನ್ನು ಸಲ್ಲಿಸಲು ತಿಳಿಸಬೇಕು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹೈ.ಕ. ಭಾಗದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಸಮಿತಿಗಳನ್ನು ರಚಿಸಿದ್ದಲ್ಲಿ ಮಾಹಿತಿ ಸಂಗ್ರಹಕ್ಕೆ ಅನುಕೂಲವಾಗುವುದು ಎಂದರು.
ಇತಿಹಾಸ ರಚನಾ ಸಮಿತಿಯಲ್ಲಿ ಎಲ್ಲ ಜಿಲ್ಲೆಯ ಪರಿಣಿತರು ಈ ಸಮಿತಿಯ ಸದಸ್ಯರಾಗಿದ್ದಾರೆ. ಆಯಾ ಜಿಲ್ಲೆಯ ಸದಸ್ಯರು ಜಿಲ್ಲಾ ಸಮಿತಿಗಳಲ್ಲಿ ಪಾಲ್ಗೊಂಡು ಇತಿಹಾಸ ರಚನೆಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಿ ನೀಡಿದ್ದಲ್ಲಿ ಅವುಗಳನ್ನು ವಿಭಾಗ ಮಟ್ಟದ ಸಮಿತಿಯಲ್ಲಿ ಚರ್ಚಿಸಿ ಕ್ರೂಢೀಕರಿಸಲು ಅನುಕೂಲವಾಗುವುದು ಎಂದು ಹೇಳಿದ್ದಾರೆ.