Publish Date: Mon, 06 Jun 2022 (17:30 IST)
Updated Date: Mon, 06 Jun 2022 (17:32 IST)
ಗಂಡನ ಆಸ್ತಿ ಪಡೆದು ಮಾಡಿದ ಸಾಲ ತೀರಿಸಲು ಪತ್ನಿ ಸ್ನೇಹಿತೆ ಮೂಲಕ ೪೦ ಲಕ್ಷ ರೂ. ಸುಪಾರಿ ನೀಡಿ ಸಿಕ್ಕಿಬಿದ್ದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಿನ ಟಿ ದಾಸರಹಳ್ಳಿಯ ನಿವಾಸಿ ಮಮತಾ ಪತಿ ಮುಕುಂದನ ಕೊಲೆಗೆ 40 ಲಕ್ಷ ರೂ.ಗೆ ಸುಪಾರಿ ನೀಡಿ ಸಿಕ್ಕಿಬಿದ್ದಿದ್ದು, ಕೊಲೆಗೆ ಯತ್ನಿಸಿದ ಮಮತಾಳ ಸ್ನೇಹಿತೆ ತಸ್ಲೀಮಾ, ಸುಪಾರಿ ಹಂತಕರಾದ ಮೌಲಾ, ಸಯ್ಯದ್ ನಯೀಮ್ ಅವರನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಎಫ್ಡಿಎ ಆಗಿ ಕಾರ್ಯ ನಿರ್ವಹಿಸುತ್ತಿರುವ ಬೆಂಗಳೂರಿನ ಟಿ. ದಾಸರಹಳ್ಳಿಯ ಮುಕುಂದ, ಪ್ರತಿದಿನ ಬೆಂಗಳೂರಿನಿಂದ ತಮ್ಮ ಸ್ಯಾಂಟ್ರೋ ಕಾರಿನಲ್ಲಿ ತಮ್ಮ ನಾಲ್ವರು ಸಹ ಉದ್ಯೋಗಿಗಳೊಂದಿಗೆ ಬೆಂಗಳೂರಿಗೆ ಬಂದು ಹೋಗುತ್ತಿದ್ದರು.
ಮೇ 26ರಂದು ಕೆಲಸ ಮುಗಿಸಿ ಸ್ಯಾಂಟ್ರೋ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದಾಗ ದೊಡ್ಡಬಳ್ಳಾಪುರ ನಗರದ ಕೈಗಾರಿಕೆ ಪ್ರದೇಶದಲ್ಲಿ ಸ್ಯಾಂಟ್ರೋ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ಕಾರು ಗಾಜು ಒಡೆದು ಮುಕುಂದ ಕೊಲೆಗೆ ಯತ್ನಿಸಿದ್ದರು. ಆದರೆ ಅದೃಷ್ಟವಶಾತ್ ಕಾರು ಡೋರ್ ಲಾಕ್ ಆಗಿದ್ದು, ಸಾರ್ವಜನಿಕರು ಬಂದ ಕಾರಣ ಹಂತಕರ ಪ್ಲ್ಯಾನ್ ಫ್ಲಾಪ್ ಆಗಿ ವಾಪಸ್ಸಾಗಿದ್ದರು. ಬಿಳಿ ಬಣ್ಣದ ಕಾರಿನಲ್ಲಿ ಬಂದವರು ಕೊಲೆಗೆ ಯತ್ನಿಸಿದ್ದಾರೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪೊಲೀಸರು ಘಟನೆ ನಡೆದ ಪ್ರದೇಶದ ಸಿಸಿಟಿವಿಗಳ ದೃಶ್ಯಗಳನ್ನು ಪರಿಶೀಲಿಸಿದಾಗ ಬಿಳಿ ಬಣ್ಣದ ಕಾರಿನ ಮೇಲೆ ಅನುಮಾನ ಬಂದಿತ್ತು. ಅನುಮಾನದ ಮೇರೆಗೆ ಕಾರು ನಂಬರ್ ಆಧರಿಸಿ ಕಾರು ಪತ್ತೆ ಹಂಚಲು ಮುಂದಾದಾಗ ಆ ಕಾರು ಒಬ್ಬರಲ್ಲ, 7 ಮಂದಿ ಮಾಲೀಕರ ಬದಲಾವಣೆಯಾಗಿರುವ ವಿಷಯ ಬೆಳಕಿಗೆ ಬಂದಿದೆ. ಕಾರನ್ನ ಗ್ಯಾರೇಜ್ ಒಂದರಲ್ಲಿ ಪತ್ತೆ ಹಚ್ಚಿದ್ದದ ಪೊಲೀಸರು ಆರೋಪಿ ಮೌಲ ಹಾಗೂ ನಯೀಮ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಮತಾಳ ಸುಪಾರಿ ಕಥೆ ಬಯಲಾಗಿದೆ.