Select Your Language

Notifications

webdunia
webdunia
webdunia
webdunia

ನಮ್ಮಿಂದ ಕಿತ್ತುಕೊಂಡಿದ್ದನ್ನೇ ಕೇಳಿದರೆ ಕೋಪ, ಸಿಟ್ಟು: ಸಿದ್ದರಾಮಯ್ಯ

ನಮ್ಮಿಂದ ಕಿತ್ತುಕೊಂಡಿದ್ದನ್ನೇ ಕೇಳಿದರೆ ಕೋಪ, ಸಿಟ್ಟು: ಸಿದ್ದರಾಮಯ್ಯ
bengaluru , ಭಾನುವಾರ, 26 ಜೂನ್ 2022 (18:46 IST)

ಬಹು ಸಂಖ್ಯಾತರ ಅಕ್ಷರವನ್ನೇ ಕಸಿದುಕೊಂಡರು. ಶೂದ್ರರೂ ತಾವು ಉತ್ಪಾದಿಸಿದ್ದನ್ನೇ ಬಳಸದಂತೆ ಮಾಡಿದರು. ಈಗ ನಾವು ನಮ್ಮಿಂದ ಕಿತ್ತುಕೊಂಡಿದ್ದನ್ನೇ ವಾಪಸ್‌ ಕೇಳಿದರೆ ಸಿಟ್ಟು ಕೋಪ ಬರುತ್ತದೆ. ನಾವೇನು ಭಿಕ್ಷೆ ಬೇಡುತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನಲ್ಲಿ ಭಾನುವಾರ ನಡೆದ ನ್ಯಾಯಮೂರ್ತಿ ನಾಗಮೋಹನ ದಾಸ್‌ ಅವರ ಮೀಸಲಾತಿ “ಭ್ರಮೆ ಮತ್ತು ವಾಸ್ತವ” ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಒಂದು 140-150 ಪುಟಗಳಿರುವ ಚಿಕ್ಕ ಪುಸ್ತಕ ಇದು. ಪುಸ್ತಕದಲ್ಲಿ ಚಿಕ್ಕದಾಗಿ ಚೊಕ್ಕದಾಗಿ ಮೀಸಲಾತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ನಾಗಮೋಹನ್‌ ದಾಸ್‌ ಅವರು ನ್ಯಾಯಮೂರ್ತಿಗಳಾಗಿರುವುದರಿಂದ ಸಂವಿಧಾನದ ಬಗ್ಗೆ ಹೆಚ್ಚು ಓದಿಕೊಂಡು, ಜ್ಞಾನ ಹೊಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಂವಿಧಾನ ಓದು ಎಂಬ ಕಿರುಹೊತ್ತಿಗೆಯನ್ನು ಬರೆದಿದ್ದರು. ನಾನೂ ಅದನ್ನು ಓದಿದ್ದೇನೆ. ದೇಶದ ಪ್ರತಿಯೊಬ್ಬ ಪ್ರಜೆ ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು. ಇದನ್ನು ಒಂದು ಪುಸ್ತಕವಾಗಿ ಮಾತ್ರವಲ್ಲ ಒಂದು ಅಭಿಯಾನವಾಗಿ ಜನರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಆ ಸಂದರ್ಭದಲ್ಲಿ ಮೀಸಲಾತಿ ಬಗ್ಗೆ ಬಹಳಷ್ಟು ಪ್ರಶ್ನೆಗಳು ಬರುತ್ತಿದ್ದವು ಎಂಬುದನ್ನು ಅವರು ಹೇಳಿದರು. ಇದರ ಅರ್ಥ ಮೀಸಲಾತಿ ಯಾಕೆ ಹುಟ್ಟಿತು, ಅದರ ಉದ್ದೇಶ ಮತ್ತು ಅನಿವಾರ್ಯತೆ ಬಗ್ಗೆ ಜನರಿಗೆ ಮಾಹಿತಿ ಕೊರತೆ ಇದೆ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ನಾವು ಉತ್ತರ ನೀಡಿದರೂ ಕೆಲವರು ಮೀಸಲಾತಿಯನ್ನು ವಿಕೃತವಾಗಿ ನೋಡುತ್ತಿದ್ದಾರೆ ಎಂದರು.

ನಮ್ಮ ಸಮಾಜ ಜಾತಿ ವ್ಯವಸ್ಥೆ ಕಾರಣಕ್ಕಾಗಿ ಅಸಮಾನತೆ ಇಂದ ಕೂಡಿದೆ. ಇದು ಅವಕಾಶ ವಂಚಿತ ಜನರಿಂದ ಆದದ್ದಲ್ಲ. ಈ ಅಸಮಾನತೆ ಉಂಟಾಗಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕಾರಣ. ಇವರು ತಮ್ಮ ಸ್ವಾರ್ಥಕ್ಕಾಗಿ ಸಮಾಜದಲ್ಲಿ ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸಿ, ರಾಜಕೀಯ, ಆರ್ಥಿಕ ಅಸಮಾನತೆ ಸೃಷ್ಟಿ ಮಾಡಿದ್ದಾರೆ. ಚತುರ್ವರ್ಣ ವ್ಯವಸ್ಥೆಯಲ್ಲಿ ಬ್ರಾಹ್ಮಣರು, ಕ್ಷತ್ರಿಯರು ಹಾಗೂ ವೈಶ್ಯರಿಗೆ ಓದಲು, ಸಂಪತ್ತನ್ನು ಅನುಭವಿಸಲು, ಅಧಿಕಾರ ನಡೆಸಲು ಅವಕಾಶ ಇತ್ತು. ಇದು ಮೀಸಲಾತಿ ಅಲ್ಲವೇ? ಬಹುಸಂಖ್ಯಾತ ಶೂದ್ರರನ್ನು ಅಕ್ಷರ ಸಂಸ್ಕೃತಿಯಿಂದ ವಂಚಿಸಿ, ಅವರೇ ಉತ್ಪಾದನೆ ಮಾಡಿದ ಸಂಪತ್ತನ್ನು ಅನುಭವಿಸಲು ಅವಕಾಶ ನೀಡದೆ ಇದ್ದದ್ದು ಅನ್ಯಾಯ ಅಲ್ಲವೇ? ಎಂದು ಅವರು ಪ್ರಶ್ನಿಸಿದರು.

ಇದೇ ಕಾರಣಕ್ಕೆ ಬಸವಾದಿ ಶರಣರು ಕಾಯಕ ದಾಸೋಹ ತತ್ವವನ್ನು ಸಾರಿದರು. ಶೂದ್ರ ಜನರಿಗೆ ಕೊಳಕು ಕೆಲಸಗಳನ್ನು ಮಾತ್ರ ಬಿಟ್ಟು, ಸಂಪತ್ತನ್ನು ಅನುಭವಿಸಿದವರು ಯಾರು? ಕೆಲಸ ಮಾಡುವವರು ಯಾರೋ ಆದರೆ ಬಂದ ಸಂಪತ್ತನ್ನು ಅನುಭವಿಸುತ್ತಾ ಕುಳಿತವರು ಯಾರೋ? ಇದು ಅಲಿಖಿತ ಮೀಸಲಾತಿ, ಇದನ್ನು ಮಾಡಿದ್ದು ಯಾರು? ಇಂದು ಅವರೇ ಮೀಸಲಾತಿ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಮೀಸಲಾತಿ ಎಷ್ಟು ವರ್ಷ ಬೇಕು? ಯಾಕಿರಬೇಕು? ಇದರಿಂದ ಪ್ರತಿಭೆ ಹಾಳಾಗಲ್ವಾ? ಹೀಗೆಲ್ಲಾ ಕೇಳುತ್ತಿರುವವರು ಸಮಾಜದಲ್ಲಿ ಅಸಮಾನತೆ ನಿರ್ಮಾಣ ಮಾಡಲು ಕಾರಣಕರ್ತರಾದವರೇ. ಕ್ರಿಮಿಲೇಯರ್‌ ಎಲ್ಲರಿಗೂ ಏಕೆ ಇಲ್ಲ? ಎಂದು ಅವರು ಕೇಳುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಇನ್ನೆರಡು ದಿನದಲ್ಲಿ ಶಿವಸೇನೆ ಬಂಡಾಯ ಶಾಸಕರಿಂದ ಸರಕಾರ ರಚನೆಗೆ ಹಕ್ಕು ಮಂದನೆ?