Publish Date: Wed, 03 Jun 2026 (11:48 IST)
Updated Date: Wed, 03 Jun 2026 (11:53 IST)
ಬೆಂಗಳೂರು: ಡಿಕೆ ಶಿವಕುಮಾರ್ ಇಂದು ರಾಜ್ಯದ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಅವರ ಜೀವನದಲ್ಲಿ ಸೈಲೆಂಟ್ ಆಗಿಯೇ ಶಕ್ತಿಯಾಗಿ ನಿಂತಿರುವ ಈ ಮಹಿಳೆ ಬಗ್ಗೆ ತಿಳಿದುಕೊಳ್ಳೋಣ.
ಡಿಕೆ ಶಿವಕುಮಾರ್ ಕುಟುಂಬದಲ್ಲಿ ಎಲ್ಲರಿಗೂ ಚಿರಪರಿಚಿತರು ಎಂದರೆ ಅವರ ಮಗಳು ಐಶ್ವರ್ಯಾ ಮತ್ತು ಸಹೋದರ ಡಿಕೆ ಸುರೇಶ್. ಉಳಿದವರು ಸಾರ್ವಜನಿಕ ಜೀವನದಿಂದ ದೂರವೇ ಇದ್ದಾರೆ. ಐಶ್ವರ್ಯಾ ಅಲ್ಲದೆ ಡಿಕೆಶಿಗೆ ಇನ್ನೂ ಇಬ್ಬರು ಮಕ್ಕಳಿದ್ದಾರೆ. ಆಭರಣ ಮತ್ತು ಆಕಾಶ್. ಇವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದೇ ಇಲ್ಲ.
ಸಹೋದರ ಮತ್ತು ಹಿರಿಯ ಪುತ್ರಿಯನ್ನು ಬಿಟ್ಟರೆ ಸಾರ್ವಜನಿಕವಾಗಿ ಕಾಣಿಸಿಕೊಂಡವರೆಂದರೆ ಪತ್ನಿ ಉಷಾ. ಇವರೇ ಡಿಕೆ ಶಿವಕುಮಾರ್ ಜೀವನದ ನಿಜವಾದ ಶಕ್ತಿ. ಉಷಾ ಇದುವರೆಗೆ ಪತ್ರಿಕಾ ಹೇಳಿಕೆಗಳನ್ನು ನೀಡಿದವರಲ್ಲ. ಆದರೆ ಸೈಲೆಂಟ್ ಆಗಿಯೇ ಗಂಡನ ರಾಜಕೀಯ ಜೀವನಕ್ಕೆ ಬಲ ತುಂಬುತ್ತಾರೆ.
ಚುನಾವಣೆಯ ಸಮಯ ಬಂದಾಗ ಉಷಾ ಶಿವಕುಮಾರ್ ಅವರು ಪತಿಯ ಪರವಾಗಿ ಬ್ಯಾಕ್ಸ್ಟೇಜ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಾರೆ. ಡಿ.ಕೆ. ಶಿವಕುಮಾರ್ ಅವರು ಇಡೀ ರಾಜ್ಯ ಪ್ರವಾಸ ಮಾಡಬೇಕಾದ ಸಂದರ್ಭದಲ್ಲಿ, ತಮ್ಮ ಸ್ವಕ್ಷೇತ್ರವಾದ ಕನಕಪುರದಲ್ಲಿ ಉಷಾ ಅವರು ಸ್ಥಳೀಯ ನಾಯಕರೊಂದಿಗೆ ಸಭೆ ನಡೆಸಿ, ಪ್ರಚಾರದ ಕಾರ್ಯಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ. ಕ್ಷೇತ್ರದ ಮಹಿಳಾ ಮತದಾರರೊಂದಿಗೆ ಅವರು ಉತ್ತಮ ಒಡನಾಟ ಹೊಂದಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ಇಡಿ (ED) ಮತ್ತು ಐಟಿ (IT) ತನಿಖೆಗಳನ್ನು ಎದುರಿಸಿದಾಗ ಹಾಗೂ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾಗ ಇಡೀ ಕುಟುಂಬ ಮಾನಸಿಕವಾಗಿ ಕಷ್ಟದ ಪರಿಸ್ಥಿತಿಯಲ್ಲಿತ್ತು. ಅಂತಹ ಕಠಿಣ ಸಮಯದಲ್ಲಿ ಉಷಾ ಶಿವಕುಮಾರ್ ಅವರು ಧೃತಿಗೆಡದೆ ಇಡೀ ಕುಟುಂಬಕ್ಕೆ ಧೈರ್ಯ ತುಂಬಿದರು. ದೆಹಲಿಗೆ ತೆರಳಿ ಪತಿಯ ಕಾನೂನು ಹೋರಾಟಕ್ಕೆ ಬೆಂಬಲವಾಗಿ ನಿಲ್ಲುವ ಮೂಲಕ ತಾನೊಬ್ಬ ಶಕ್ತಿಶಾಲಿ ಒಡನಾಡಿ ಎಂಬುದನ್ನು ಸಾಬೀತುಪಡಿಸಿದರು. ಆ ಸಮಯದಲ್ಲಿ ಇವರ ಧೈರ್ಯವನ್ನು ಕಂಡು ರಾಜಕೀಯ ವಲಯವೂ ಮೆಚ್ಚುಗೆ ವ್ಯಕ್ತಪಡಿಸಿತ್ತು.
ಉಷಾ ಅವರು ಅತ್ಯಂತ ದೈವಭಕ್ತರು. ಡಿ.ಕೆ. ಶಿವಕುಮಾರ್ ಅವರು ಯಾವುದೇ ಪ್ರಮುಖ ರಾಜಕೀಯ ನಿರ್ಧಾರ ತೆಗೆದುಕೊಳ್ಳುವ ಮುನ್ನ ಅಥವಾ ಚುನಾವಣೆಗೆ ಸ್ಪರ್ಧಿಸುವ ಮುನ್ನ ಉಷಾ ಅವರು ಕುಟುಂಬದ ಪರವಾಗಿ ದೇವಸ್ಥಾನಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ ಹಾಗೂ ಹರಕೆಗಳನ್ನು ಸಲ್ಲಿಸುವುದು ಅವರ ವಾಡಿಕೆ.
ಡಿಕೆ ಶಿವಕುಮಾರ್ ಅವರ ಮೂವರೂ ಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆದವರೇ. ಮಕ್ಕಳು ತಮ್ಮದೇ ಆದ ವೃತ್ತಿಪರ ವಿದ್ಯಾಭ್ಯಾಸ ಪಡೆಯಬೇಕು ಎಂಬುದು ಉಷಾ ಅವರ ಒತ್ತಾಸೆಯಾಗಿತ್ತಂತೆ. ಮಕ್ಕಳೆಲ್ಲರಿಗೂ ಮನೆಯಲ್ಲಿ ಒಂದೇ ರೂಲ್ಸ್. ಚೆನ್ನಾಗಿ ಓದಬೇಕು, ನಿಮ್ಮದೇ ಹೆಸರು ಮಾಡಬೇಕು ಎಂದು ಅಮ್ಮ ಯಾವಾಗಲೂ ನಮಗೆ ಹೇಳುತ್ತಿದ್ದರು ಎಂದು ಮಗಳು ಐಶ್ವರ್ಯಾ ಒಮ್ಮೆ ಹೇಳಿದ್ದರು.
ರಾಜಕೀಯವಾಗಿ ಡಿ.ಕೆ. ಶಿವಕುಮಾರ್ ಅವರು ಉನ್ನತ ಮಟ್ಟಕ್ಕೇರುತ್ತಿದ್ದ ಆರಂಭಿಕ ದಿನಗಳಲ್ಲೇ ಉಷಾ ಅವರು ಅವರ ಜೀವನ ಸಂಗಾತಿಯಾಗಿ ಮನೆ ತುಂಬಿಸಿಕೊಂಡರು. ಅಂದಿನಿಂದ ಇಂದಿನವರೆಗೆ ಶಿವಕುಮಾರ್ ಅವರ ವೈಯಕ್ತಿಕ ಹಾಗೂ ವೃತ್ತಿಪರ ಜೀವನದ ಪ್ರತಿಯೊಂದು ಕಠಿಣ ಹಂತದಲ್ಲೂ ಉಷಾ ಅವರು ದೃತಿಗೆಡದೆ ಜೊತೆಯಾಗಿ ನಿಂತಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ