Publish Date: Sat, 07 Sep 2024 (13:34 IST)
Updated Date: Sat, 07 Sep 2024 (13:36 IST)
ಬೆಂಗಳೂರು: ಮುಡಾ ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಒಂದು ವೇಳೆ ರಾಜೀನಾಮೆ ನೀಡಬೇಕಾಗಿ ಬಂದರೆ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆಗೆ ಕಾಂಗ್ರೆಸ್ ಹೈಕಮಾಂಡ್ ಉತ್ತರ ಕಂಡುಕೊಂಡಿದೆ ಎನ್ನಲಾಗಿದೆ.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಪಾತ್ರ ಕಂಡುಬಂದರೆ ರಾಜೀನಾಮೆ ನೀಡಬೇಕಾಗುತ್ತದೆ ಎಂಬ ಸಂದೇಶವನ್ನು ಹೈಕಮಾಂಡ್ ನೀಡಿದೆ ಎನ್ನಲಾಗುತ್ತಿದೆ. ಹೀಗಿದ್ದಾಗ ಅವರ ಸ್ಥಾನಕ್ಕೆ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆಗೆ ಈಗಾಗಲೇ ರಾಜ್ಯ ಪ್ರಭಾವಿ ನಾಯಕರು ಹೈಕಮಾಂಡ್ ಮುಂದೆ ಲಾಬಿ ನಡೆಸುತ್ತಿದ್ದಾರೆ.
ಇದರ ನಡುವೆ ಇತ್ತೀಚೆಗೆ ಸತೀಶ್ ಜಾರಕಿಹೊಳಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿಕೊಂಡು ಬಂದ ಮೇಲೆ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಅವರ ಅಭಿಮಾನಿಗಳಂತೂ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಎಂದು ಘೋಷಣೆ ಕೂಗಲು ಆರಂಭಿಸಿದ್ದಾರೆ.
ವಿಶೇಷವೆಂದರೆ ಈ ಘೋಷಣೆಗಳ ಬಗ್ಗೆ ಸತೀಶ್ ಜಾರಕಿಹೊಳಿ ಕೂಡಾ ಮೌನವಾಗಿದ್ದಾರೆ. ಹೀಗಾಗಿ ಸತೀಶ್ ಜಾರಕಿಹೊಳಿಗೆ ಹೈಕಮಾಂಡ್ ಬೆಂಬಲವಿದೆಯೇ ಈ ಕಾರಣಕ್ಕೆ ಸ್ವಲ್ಪ ದಿನ ಮೌನವಾಗಿರುವಂತೆ ಸೂಚಿಸಲಾಗಿದೆಯೇ ಎಂಬಿತ್ಯಾದಿ ಗುಸು ಗುಸು ಕೇಳಿಬರುತ್ತಿದೆ.